
ಮಡಿಕೇರಿ ಆ.16 NEWS DESK : ಸ್ವಾತಂತ್ರ್ಯ ದಿನಾಚರಣೆ ಕಂಡಕರೆ ಸರ್ಕಾರಿ ಹಿರಿಯ ಪ್ರಾಥಮ ಶಾಲೆಯ ವಿದ್ಯಾರ್ಥಿಗಳಿಗೆ ಕಂಡಕರೆ ಗಾಂಧಿ ಯುವಕ ಸಂಘದಿಂದ ಉಚಿತ ಸಮವಸ್ತ್ರ (ಟ್ರ್ಯಾಕ್ ಪ್ಯಾಂಟ್ ಮತ್ತು ಟೀ ಶರ್ಟ್) ದಿನಾಚರಣೆ ಮಾಡಲಾಯಿತು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ರತೀಶ್ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿ, ಕಂಡಕರೆಯ ಗಾಂಧಿ ಯುವಕ ಸಂಘವು ಶಾಲೆಗೆ ನಿರಂತರವಾಗಿ ಸಹಕಾರ, ಬೆಂಬಲ ನೀಡುತ್ತಾ ಬಂದಿದೆ. ಇತ್ತೀಚೆಗಷ್ಟೇ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕವನ್ನು ವಿತರಿಸಿದ್ದರು. ಅದಲ್ಲದೇ ಕಳೆದ ವರ್ಷ ಶಾಲೆಗೆ 25 ಕುರ್ಚಿಗಳನ್ನು ನೀಡಿದ್ದಾರೆ. ಟ್ರ್ಯಾಕ್ ಪ್ಯಾಂಟ್ ಮತ್ತು ಟೀ ಶರ್ಟ್ ಬಗ್ಗೆ ಗಾಂಧಿ ಯುವಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ ಅವರೊಂದಿಗೆ ಕೇಳಿಕೊಂಡಾಗ ತಕ್ಷಣ ಸ್ಪಂದಿಸಿ, ಇದೀಗ 50 ಸಾವಿರ ಬೆಲೆ ಬಾಳುವ ಉತ್ತಮ ಗುಣಮಟ್ಟದ ಟೀ ಶರ್ಟ್ ನೀಡಿದ್ದಾರೆ ಎಂದರು. ಸರ್ಕಾರಿ ಶಾಲೆಯ ಉಳಿವಿಗೆ ಗಾಂಧಿ ಯುವಕ ಸಂಘವು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಗ್ರಾ.ಪಂ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ, ಗಾಂಧಿ ಯುವಕ ಸಂಘವು ಸರ್ಕಾರಿ ಶಾಲೆಗೆ ಉಚಿತವಾಗಿ ಸಮವಸ್ತ್ರ ನೀಡಿರುವುದು ಶ್ಲಾಘನೀಯ ಕೆಲಸವಾಗಿದೆ. ಗಾಂಧಿ ಯುವಕ ಸಂಘವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಶಾಲೆಯ ಅಭಿವೃದ್ಧಿ ಕೆಲಸಗಳಲ್ಲಿ ಯಾರೂ ಕೂಡ ರಾಜಕೀಯ ಮಾಡದೇ, ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಬಲ್ಲಾರಂಡ ಕಂಠಿ ಕಾರ್ಯಪ್ಪ ಮನವಿ ಮಾಡಿದರು. ಗ್ರಾ.ಪಂ ಸದಸ್ಯ ಸಿ.ಈ.ತೀರ್ಥಕುಮಾರ್ (ಮೂಡಳ್ಳಿ ರವಿ ) ಮಾತನಾಡಿ, ಇಸ್ಮಾಯಿಲ್ ಕಂಡಕರೆ ಅವರ ನೇತೃತ್ವ ಗಾಂಧಿ ಯುವಕ ಸಂಘವು ಎಲ್ಲರಿಗೂ ಮಾದರಿಯಾಗಿ ಜಾತಿ, ಧರ್ಮ, ರಾಜಕೀಯ ರಹಿತವಾಗಿ ಸಮಾಜ ಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ನಡೆಸಿ ಇಡೀ ಜಿಲ್ಲೆಯ ಜನತೆಗೆ ಮಾದರಿಯಾಗಿದ್ದಾರೆ. ಇದೀಗ ಉಚಿತವಾಗಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿದ್ದು ಶ್ಲಾಘನೀಯ ಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭ ಗಾಂಧಿ ಯುವಕ ಸಂಘದಿಂದ ಶಾಲಾ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆದ ಚಿತ್ರಕಲಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಗಾಂಧಿ ಯುವಕ ಸಂಘದ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ, ಕಾಫಿಬೋರ್ಡ್ ಕಾಫಿ ಸಂಶೋಧನಾ ಕೇಂದ್ರದ ಉಪನಿರ್ದೇಶಕಿ ಡಾ.ಜೀನಾ ದೇವಸ್ಯಾ, ಗ್ರಾ.ಪಂ ಅಧ್ಯಕ್ಷೆ ಸಿಂಧೂ, ಸದಸ್ಯೆ ನಂದಿನಿ ಉದಯ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮಜೀದ್ ಪಿ.ಎಂ.ಶಾಲಾ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೂಜಾ ಮುರಳಿ, ಗಾಂಧಿ ಯುವಕ ಸಂಘದ ಉಪಾಧ್ಯಕ್ಷ ಸವಾದ್ ಉಸ್ಮಾನ್ ಮತ್ತಿತರರು ಇದ್ದರು.








