
ನಾಪೋಕ್ಲು ಸೆ.3 NEWS DESK : ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ಕೈಲು ಮುಹೂರ್ತ (ಕೈಲ್ ಪೊಳ್ದ್) ಪ್ರಯುಕ್ತ ಜನಾಂಗ ಬಂಧುಗಳಿಗೆ ಕ್ರೀಡಾಕೂಟ ನಡೆಯಿತು. ಮೈಸೂರಿನ ವಿಶ್ವ ವಿದ್ಯಾಲಯ ಕ್ರೀಡಾ ಮೈದಾನದಲ್ಲಿ ನಡೆದ ಕ್ರೀಡಾಕೂಟ ವನ್ನು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಬಲೂನು ಹಾರಿಬಿಡುವ ಮೂಲಕ ಉದ್ಘಾಟಿಸಿದರು. ನಂತರ ನಡೆದ ಕ್ರೀಡಾಕೂಟದಲ್ಲಿ 5 ವರ್ಷದ ಮಕ್ಕಳಿಂದ ಹಿಡಿದು 70 ವರ್ಷ ವಯಸ್ಸಿನ, ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ತಲಾ ಎರಡು ಸ್ಪರ್ಧೆ ಗಳಂತೆ ಒಟ್ಟು 40 ಸ್ಪರ್ಧೆಗಳು ನಡೆದವು. ಇದರೊಂದಿಗೆ ಸಾಂಪ್ರದಾಯಿಕ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆಯು ನಡೆಯಿತು. ಇದೆ ಕ್ರೀಡಾ ಕೂಟದ ಭಾಗವಾಗಿ ಪುರುಷರು ಮತ್ತು ಮಹಿಳೆಯರಿಗೆ ಶಟಲ್ ಬ್ಯಾಡ್ಮಿಂಟನ್ ಸ್ಪರ್ದೆ ಹಾಗೂ ಕ್ರಿಕೆಟ್ ಪಂದ್ಯಾಟ ಗಳು ನಡೆದವು. ಈ ಸಂದರ್ಭ ವೇದಿಕೆಯಲ್ಲಿ ಮೈಸೂರು ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷ ತೋಟಂಬೈಲು ಮನೋಹರ್, ಕ್ರೀಡಾ ಸಂಚಾಲಕ ಕೊಂಬಾರಾನ ಸುಬ್ಬಯ್ಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂಡಿರ ಬಸಪ್ಪ, ಸಮಾಜದ ಪದಾಧಿಕಾರಿಗಳು, ನಿರ್ದೇಶಕರು ಪಾಲ್ಗೊಂಡಿದ್ದರು. ಸಮಾಜದ ಕಾರ್ಯದರ್ಶಿ ಪೋನ್ನೇಟಿ ನಂದ ಸ್ವಾಗತಿಸಿದರು. ನಿರ್ದೇಶಕ ಪಟ್ಟಡ ಶಿವಕುಮಾರ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ವರದಿ : ದುಗ್ಗಳ ಸದಾನಂದ.










