ಮಡಿಕೇರಿ NEWS DESK ಸೆ.5 : ಖ್ಯಾತ ನಿದೇರ್ಶಕ, ನಟ ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ನಿರ್ಮಾಣ ಮಾಡಿರುವ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರ ರಾಜ್ಯಾದ್ಯಂತ ಇಂದು ಚಿತ್ರಮಂದಿರಗಳಲ್ಲಿ ತೆರೆ ಕಂಡು ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಮಡಿಕೇರಿ ನಿವಾಸಿ, ನಿವೃತ್ತ ಸುಬೇದಾರ್ ಮೇಜರ್ ಪೂಜಾರೀರ ಬೆಳ್ಯಪ್ಪ ಹಾಗೂ ವೇದಾವತಿ ದಂಪತಿಯ ಪುತ್ರ ಪೂಜಾರೀರ ಬಿ.ಚಂದ್ರಜಿತ್ ಈ ಚಿತ್ರವನ್ನು ನಿರ್ದೇಶಿಸಿರುವುದು ವಿಶೇಷ. ಚಿತ್ರದ ಕಥೆ ಮತ್ತು ಹಾಡುಗಳನ್ನು ಇವರೇ ಬರೆದಿದ್ದು, ಈಗಾಗಲೇ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರ ಸಿನಿ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
“ಬ್ಲಾಗ್ ಬರವಣಿಗೆಯ ಕಾಲದಲ್ಲಿ ಒಂಬತ್ತು ವರ್ಷಗಳ ಹಿಂದೆ ಚಂದ್ರಜಿತ್ ನೀಡಿದ್ದ ಲಿಂಕ್ ಇಂದು ಸಿನಿಮಾವಾಗಿದೆ. ಆ ಬರಹ ತುಂಬಾ ವಿಶೇಷವಾಗಿತ್ತು. ಅದೇ ಬ್ಲಾಗ್ ಕಥೆ ಇಂದು ಸಿನಿಮಾವಾಗಿದೆ. ಈ ರೀತಿಯ ಕಥೆ ಇರುವ ಸಿನಿಮಾ ಈ ಹಿಂದೆ ಬಂದಿರಬಹುದು. ಆದರೆ, ಇಂತಹ ನಿರೂಪಣೆಯ ಚಿತ್ರ ಸ್ಯಾಂಡಲ್ವುಡ್ನಲ್ಲಿ ಬಂದಿಲ್ಲ ಎಂದು ರಕ್ಷಿತ್ ಶೆಟ್ಟಿ ಅವರು ಪೂಜಾರೀರ ಚಂದ್ರಜಿತ್ ಅವರ ನಿರ್ದೇಶನದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದೊಂದು ಪ್ರೇಮಕಾವ್ಯವಾಗಿದ್ದು, ಈಗಾಗಲೇ ಚಿತ್ರ ನೋಡಿದವರು ಹೃದಯಸ್ಪರ್ಶಿ ಪ್ರೇಮಕಥೆಯ ಕುರಿತು ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಚಂದ್ರಜಿತ್ ಬೆಳ್ಯಪ್ಪ ನಿರ್ದೇಶಿಸಿರುವ “ಇಬ್ಬನಿ ತಬ್ಬಿದ ಇಳೆಯಲಿ” ಸಿನಿಮಾದಲ್ಲಿ ಸಿದ್ಧಾರ್ಥ್ ಅಶೋಕ್ ಆಗಿ ವಿಹಾನ್ ಗೌಡ, ಅನಹಿತಳಾಗಿ ಅಂಕಿತಾ ಅಮರ್, ಮಧುಮಿತಳಾಗಿ ಗಿರಿಜಾ ಶೆಟ್ಟರ್, ರಾಧಾ ಪಾತ್ರದಲ್ಲಿ ಮಯೂರಿ ನಟರಾಜ ನಟಿಸಿದ್ದಾರೆ. ಫರ್ಹಾನ್ ಆಗಿ ಶಂಕರ್ ಮೂರ್ತಿ ಎಸ್.ಆರ್, ಅಶೋಕ್ ನಾಚಪ್ಪ ಪಾತ್ರದಲ್ಲಿ ಸಲ್ಮಿನ್ ಶೆರಿಫ್ ನಟಿಸಿದ್ದಾರೆ. ಗಗನ್ ಬಡೇರಿಯಾ ಸಂಗೀತ ನೀಡಿದ್ದು, ಶ್ರೀನಿವಾಸನ್ ಸೆಲ್ವರಾಜನ್ ಛಾಯಾಗ್ರಹಣ ಮಾಡಿದ್ದಾರೆ. ರಕ್ಷಿತ್ ಕಾಪು ಸಂಕಲನ, ಶರತ್ ಕೆ.ವಿ ಪ್ರೊಡಕ್ಷನ್ ಡಿಸೈನರ್, ನವ್ಯಾ ಬಿಆರ್ ಕಾಸ್ಟ್ಯುಮ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಮೊದಲ ಚಿತ್ರದಲ್ಲೇ ಯಶಸ್ಸು ಕಂಡಿರುವ ಪೂಜಾರೀರ ಬಿ.ಚಂದ್ರಜಿತ್ ಅವರಿಗೆ ಪೂಜಾರೀರ ಕುಟುಂಬಸ್ಥರು, ಬಂಧು ಬಳಗ ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ.









