
ಮಡಿಕೇರಿ ಜು.16 NEWS DESK : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಮೇಲೆ ಪ್ರಭಾವ ಬೀರುವ ಮೂಲಕ ರಾಜ್ಯದ 70 ರಿಂದ 75 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಗಿಡುವ ಮೂಲಕ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಪ್ರಯತ್ನ ಬಿಜೆಪಿಯದ್ದೆಂದು ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಪಕ್ಷದ ಎಸ್ಐಆರ್ ರಾಜ್ಯ ಉಸ್ತುವಾರಿಗಳಾದ ವಿ.ಆರ್.ಸುದರ್ಶನ್ ಗಂಭೀರ ಆರೋಪ ಮಾಡಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿತ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಎಸ್ಐಆರ್ನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಮತ್ತು ಎಚ್ಚರಿಕೆಯನ್ನು ತೆಗೆದುಕೊಂಡಿದೆ. ಯಾವೊಬ್ಬ ನೈಜ ಮತದಾರರ ಮತದಾನದ ಹಕ್ಕನ್ನು ರಾಜ್ಯ ಚುನಾವಣಾ ಆಯೋಗ ಕಸಿದುಕೊಳ್ಳ ಕೂಡದು. ಬಡವರು, ರೈತಾಪಿ ವರ್ಗ ಹೀಗೆ ಸಮಾಜದ ದುರ್ಬಲ ವರ್ಗದ ಮಂದಿ ಮತದಾನದ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ನೈಜ ಕಾಳಜಿಯನನ್ನು ಕಾಂಗ್ರೆಸ್ ಹೊಂದಿರುವುದಾಗಿ ಸ್ಪಷ್ಟಪಡಿಸಿದರು. ಆತಂಕವನ್ನು ಹುಟ್ಟು ಹಾಕಿರುವ ಎಸ್ಐಆರ್ :: ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಹತ್ತು ಬಾರಿ ಮತದಾರರ ಪಟ್ಟಿ ಪರಿಷ್ಕರಣೆಯಾಗಿದೆ. ಹಿಂದೆಂದೂ ಇಲ್ಲದ ಗೊಂದಲ ಮತ್ತು ಆತಂಕವನ್ನು ಜನಸಾಮಾನ್ಯರಲ್ಲಿ ಎಸ್ಐಆರ್ ಮೂಲಕ ಮೂಡಿಸುವ ಪ್ರಯತ್ನವನ್ನು ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಸೃಷ್ಟಿಸಿರುವುದಾಗಿ ಸುದರ್ಶನ್ ಕಟುವಾಗಿ ನುಡಿದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಧಾನವಾಗಿ, ಪ್ರಸ್ತುತ ನಡೆಯುತ್ತಿರುವ ಎಸ್ಐಆರ್ ಮೂಲಕ ನೈಜ ಮತದಾರರು ಮತ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಕಾಂಗ್ರೆಸ್ ಬೆಂಬಲಿಸುವ ಮತದಾರರನ್ನು ಉದ್ದೇಶಪೂರ್ವಕವಾಗಿ ಮತಪಟ್ಟಿಯಿಂದ ಹೊರಗಿಡುವ ಯಾವುದೇ ಪ್ರಯತ್ನಗಳು ನಡೆಯದಂತೆ ನೋಡಿಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿದೆ. ಎಸ್ಐಆರ್ನ್ನು ಅತ್ಯಂತ ಕ್ರಮಬದ್ಧವಾಗಿ ನಡೆಯವುದಕ್ಕೆ ಪೂರಕವಾಗಿ ಕೆಪಿಸಿಸಿ ಅಧ್ಯಕ್ಷರು, ಮುಖ್ಯ ಮಂತ್ರಿಗಳು ಮತ್ತು ಪಕ್ಷದ ಪ್ರಮುಖರೊಂದಿಗೆ ಸಮಾಲೋಚನೆ ಮಾಡುವ ಮೂಲಕ ರಾಜ್ಯವ್ಯಾಪಿ 60 ಸಾವಿರಕ್ಕೂ ಹೆಚ್ಚಿನ ಬೂತ್ಗಳಿಗೆ ಪಕ್ಷ “ಬಿಎಲ್ಎ-2″ಗಳನ್ನು ನಿಯುಕ್ತಿಗೊಳಿಸಿದೆ. ಇದರೊಂದಿಗೆ ಈಗಿನ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಮತ್ತು ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರತಿ ಜಿಲ್ಲೆಗೆ ಎಸ್ಐಆರ್ಗೆ ಸಂಬಂಧಿಸಿದಂತೆ ಪಕ್ಷದಿಂದ ವೀಕ್ಷಕರ ನಿಯುಕ್ತಿ ಮಾಡಿರುವುದಲ್ಲದೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಹಕಾರದೊಂದಿಗೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಅನುಕೂಲಕರವಾಗುವಂತೆ ಬಿಎಲ್ಎಗಳಿಗೆ ಅಗತ್ಯ ತರಬೇತಿಗಳನ್ನು ನೀಡುವ ಮೂಲಕ ಪಕ್ಷ ಒಟ್ಟು ಪ್ರಕ್ರಿಯೆಯಲ್ಲಿ ಜವಾಬ್ದಾರಿಯುತವಾಗಿ ತೊಡಗಿಸಿಕೊಂಡಿರುವುದಾಗಿ ಸ್ಪಷ್ಟಪಡಿಸಿದರು. ಬಿಜೆಪಿ ಅನಗತ್ಯ ಟೀಕೆ :: ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮತದಾರರ ಪಟ್ಟಿ ಅತ್ಯವಶ್ಯಕವಾಗಿದೆ. ಎಸ್ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ಎಂದಿಗೂ ತಿರಸ್ಕಾರ ಮಾಡುತ್ತಿಲ್ಲ. ಬದಲಾಗಿ ಒಟ್ಟು ಪ್ರ್ರಕ್ರಿಯೆ ಅತ್ಯಂತ ಕ್ರಮಬದ್ಧವಾಗಿ ನಡೆಯುವುದಕ್ಕೆ ಸಹಕಾರವನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಮಂತ್ರಿಗಳು ಎಸ್ಐಆರ್ನ್ನು ಸುಸೂತ್ರವಾಗಿ ನಡೆಸುವುದಕ್ಕೆ ಅಧಿಕಾರಿಗಳು ಸಹಕರಿಸಬೇಕೆಂದಿರುವುದನ್ನು ತಿರುಚಿ, ಬಿಜೆಪಿಯು ಕಾಂಗ್ರಸ್ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿರುವುದಾಗಿ ಹೇಳಿದರು. ಹೋಬಳಿ ಕೇಂದ್ರಗಳಲ್ಲಿ ನೆರವು ಕೇಂದ್ರ ಆರಂಭಿಸಿ :: ಎಸ್ಐಆರ್ ಪ್ರಕ್ರಿಯೆ ಪೂರ್ಣಕ್ಕೆ ಮತ್ತಷ್ಟು ಸಮಯವಿದ್ದು, ಎಸ್ಐಆರ್ ಬಗ್ಗೆ ಮತದಾರರಲ್ಲಿ ಇರುವ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೋಬಳಿ ಮಟ್ಟದಲ್ಲೆ ನೆರವು ಕೇಂದ್ರಗಳನ್ನು ತೆರೆಯಬೇಕೆಂದು , ಎಸ್ಐಆರ್ ಅರ್ಜಿ ಭರ್ತಿಯ ಸಂದರ್ಭ ಕೇವಲ ಹೆಸರಿನ ಅಕ್ಷರಗಳ ತಪ್ಪಿನಂತಹ ಸಣ್ಣ ಲೋಪಗಳ ಹಿನ್ನೆಲೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ದೂರವಿಡುವ ಕಾರ್ಯ ನಡೆಯಕೂಡದೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು. ಪಿಆರ್ಸಿ ಬಗ್ಗೆ ದುರುದ್ದೇಶದ ಆರೋಪ :: ಆದಿವಾಸಿಗಳು, ಬಡವರ್ಗದ ಮಂದಿ, ನಿರ್ಗತಿಕ ಮಂದಿಯ ಅನುಕೂಲಕ್ಕಾಗಿ ಶಾಶ್ವತ ವಾಸದ ದೃಢೀಕರಣ ಪತ್ರವನ್ನು (ಪಿಆರ್ಸಿ) ತಹಸೀಲ್ದಾರ್ ಮೂಲಕ ನೀಡಲು ಸರ್ಕಾರ ಅವಕಾಶ ನೀಡಿದೆ. ಈ ವಿಚಾರದ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೂ ತರಲಾಗಿದೆ. ಚುನಾವಣಾ ಆಯೋಗವು ಮೊದಲು ಎಸ್ಐಆರ್ ಬಗ್ಗೆ ಜನ ಸಾಮಾನ್ಯರಿಗೆ ಇರುವ ಗೊಂದಲಗಳನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದರು. ಎಸ್ಐಆರ್ ಜಿಲ್ಲಾ ಉಸ್ತುವಾರಿ ಎಂ. ಲಕ್ಷ್ಮಣ್ ಮಾತನಾಡಿ. ಪಿಆರ್ಸಿ ಎನ್ನುವುದು ಹೊಸದೇನಲ್ಲ. ಚುನಾವಣಾ ಆಯೋಗವೆ “ಸಕ್ಷಮ ಪ್ರಾಧಿಕಾರದ ಮೂಲಕ ವಾಸ ದೃಢೀಕರಣ ಪತ್ರ”ವನ್ನು ಪ್ರಸ್ತಾಪಿಸಿದೆಯೆಂದು ತಿಳಿಸಿ, ಪ್ರಸ್ತುತ ಎಸ್ಐಆರ್ ಮೂಲಕ ನಡೆದಿರುವ ಗೊಂದಲಗಳು ಕೇವಲ ನೈಜ ಮತದಾರರನ್ನು ಮತಪಟ್ಟಿಯಿಂದ ಹೊರಗಿಡುವ ಹುನ್ನಾರವೆಂದು ತೀಕ್ಷ್ಣವಾಗಿ ನುಡಿದು, ಎಸ್ಐಆರ್ ಅರ್ಜಿ ಗೊಂದಲಗಳಿಂದ ಕೂಡಿದೆಯೆಂದು ಟೀಕಿಸಿದರು. ಈ ಹಿಂದೆ ಮತದಾರರ ಪಟ್ಟಿಯ ಪರಿಷ್ಕರಣೆ ಎನ್ನುವುದು ಬಿಟ್ಟು ಹೋದ ಮತದಾರರನ್ನು ಪಟ್ಟಿಗೆ ಸೇರಿಸುವ ಪ್ರಕ್ರಿಯೆಯಾಗಿತ್ತು.ಆದರೆ, ಇಂದಿನ ಎಸ್ಐಆರ್, ನೈಜ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆಯಾಗಿದೆಯೆಂದು ಆರೋಪಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಪಕ್ಷದ ಪ್ರಮುಖರಾದ ಚಂದ್ರಮೌಳಿ, ಟಿ.ಪಿ.ರಮೇಶ್, ಹಂಸ, ವಿ.ಪಿ.ಸುರೇಶ್, ತೆನ್ನೀರ ಮೈನ ಸೇರಿದಂತೆ ಹಲ ಪ್ರಮುಖರು ಉಪಸ್ಥಿತರಿದ್ದರು.









