ಮಡಿಕೇರಿ ನ.30 NEWS DESK : ರಾಷ್ಟ್ರದ ಗಡಿಗಳ ಮತ್ತು ಆಂತರಿಕ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅರೆಸೇನಾಪಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಯೋಧರ ಹಾಗೂ ಅವರ ಕುಟುಂಬದ ಮೂಲಭೂತ ಸಮಸ್ಯೆಗಳಿಗೆ ಅಗತ್ಯ ಸ್ಪಂದನ ದೊರಕಬೇಕೆನ್ನುವ ಆಶಯ ಕೊಡಗು ಜಿಲ್ಲಾ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟದ ಮಹಾಸಭೆಯಲ್ಲಿ ವ್ಯಕ್ತವಾಯಿತು. ನಗರದ ಪೊಲೀಸ್ ಸಮುದಾಯ ಭವನ ಮೈತ್ರಿಯಲ್ಲಿ ನಡೆದ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟದ ಮಹಾಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಪಲಿಯಂಡ ಚಂಗಪ್ಪ ಅವರು ಮಾತನಾಡಿ, ಬಿಎಸ್ಎಫ್, ಸಿಆರ್ಪಿಎಫ್, ಸಿಐಎಸ್ಎಫ್ ಮತ್ತು ಎಸ್ಎಸ್ಬಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರು ಸಾಕಷ್ಟು ಸಮಸ್ಯೆಗಳನ್ನು ಹೊಂದಿದ್ದಾರೆ. ಇವುಗಳ ನಿವಾರಣೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಯಬೇಕಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಶೀಲರಾಗಿರುವುದಾಗಿ ತಿಳಿಸಿದರು.
ಹಾಸನದಲ್ಲಿ ರಾಜ್ಯದ ಏಕೈಕ ಸ್ವಂತ ಕಟ್ಟಡ :: ಕೊಡಗು ಜಿಲ್ಲೆಯಲ್ಲಿ ಅರೆಸೇನಾಪಡೆಗಳ ಒಕ್ಕೂಟ ಕಳೆದ ಒಂದು ದಶಕಗಳಿಂದ ಕಾರ್ಯನಿರ್ವಹಿಸಿಕೊಂಡು ಬಂದಿದ್ದರು, ಅಗತ್ಯ ಆರ್ಥಿಕ ಶಕ್ತಿಯನ್ನು ಹೊಂದಿಲ್ಲವೆಂದು ತಿಳಿಸಿ, ಪ್ರಸ್ತುತ ಇಡೀ ರಾಜ್ಯದಲ್ಲೆ ಹಾಸನದಲ್ಲಿ ಅರೆಸೇನಾಪಡೆಗಳ ಸಂಘಟನೆ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿಕೊಂಡಿದೆ. ಈ ಕಟ್ಟಡ ನಿರ್ಮಾಣಕ್ಕೆ ಕೊಡಗಿನ ಅರೆಸೇನಾಪಡೆಗಳ ಒಕ್ಕೂಟವು ತನ್ನದೇ ಆದ ಸಣ್ಣ ಪ್ರಮಾಣದ ಆರ್ಥಿಕ ನೆರವನ್ನು ಒದಗಿಸಿದೆಯೆಂದು ತಿಳಿಸಿ, ಮುಂಬರುವ ದಿನಗಳಲ್ಲಿ ಜಿಲ್ಲೆಯ ಅರೆಸೇನಾಪಡೆಗಳ ಒಕ್ಕೂಟ ತನ್ನ ಕಾಲ ಮೇಲೆ ತಾನು ನಿಲ್ಲುವ ಹಂತದಲ್ಲಿ ಹೊರ ಜಿಲ್ಲೆಯ ಅರೆಸೇನಾಪಡೆಗಳ ಸಂಘಟನೆಗಳ ನೆರವು ಬೇಕಾಗುತ್ತದೆಂದು ಅನಿಸಿಕೆ ವ್ಯಕಪಡಿಸಿದರು.
ಕ್ಯಾಂಟಿನ್ ಸೌಲಭ್ಯ ಅಗತ್ಯವಿದೆ :: ಅರೆಸೇನಾಪಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರು ಮತ್ತು ಅವರ ಕುಟುಂಬಸ್ಥರಿಗೆ ಅಗತ್ಯ ಕ್ಯಾಂಟಿನ್ ಸೌಲಭ್ಯ ದೊರಕಬೇಕಾಗಿದೆ. ಪ್ರಸ್ತುತ ಪೊಲೀಸ್ ಇಲಾಖೆಯ ಕಾರ್ಡ್ ಪಡೆದುಕೊಂಡವರಿಗೆ ಪೊಲೀಸ್ ಕ್ಯಾಂಟಿನ್ನ ಕೆಲ ಸವಲತ್ತುಗಳು ದೊರಕುತ್ತಿರುವುದಾಗಿ ಮಾಹಿತಿ ನೀಡಿದರು.
ಆರೋಗ್ಯದತ್ತ ಹೆಚ್ಚಿನ ಕಾಳಜಿ ಇರಲಿ :: ಅರೆಸೇನಾಪಡೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವವರು ಪ್ರಮುಖವಾಗಿ ತಮ್ಮ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸುವುದು ಅತ್ಯವಶ್ಯ. ಪ್ರಸ್ತುತ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವುದು ಅತ್ಯಂತ ದುಬಾರಿಯಾಗುತ್ತಿದೆಯೆಂದು ತಿಳಿಸಿ, ಆರೋಗ್ಯ ಸಂರಕ್ಷಣೆಯತ್ತ ಪ್ರತಿಯೊಬ್ಬರು ಹೆಚ್ಚಿನ ಮುತುವರ್ಜಿ ವಹಿಸುವಂತೆ ಕರೆ ನೀಡಿದರು. ಸಭೆಯಲ್ಲಿ ಅರೆಸೇನಾಡೆಗಳ ಒಕ್ಕೂಟದ ಸದಸ್ಯರಾಗಿದ್ದು, ಕಳೆದ ಒಂದು ಆರ್ಥಿಕ ಸಾಲಿನಲ್ಲಿ ನಿಧನರಾದವರಿಗೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು. ಅರೆ ಸೇನಾಪಡೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಜಿ.ಸತೀಶ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿತ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಸಿಆರ್ಪಿಎಫ್ ಡೆಪ್ಯೂಟಿ ಕಮಾಂಡೆಂಟ್ ಮಂಜುನಾಥ್, ಉದ್ಯಮಿಗಳಾದ ಗೋಪಾಲ್, ಸಿಆರ್ಪಿಎಫ್ನ ಅಧಿಕಾರಿ ಸುರೇಶ್ ಹಾಗೂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಸಂಚಾಲಕರಾದ ಎನ್.ಎಂ.ಭೀಮಯ್ಯ, ಕಾರ್ಯದರ್ಶಿ ಬಿ.ಎಂ.ರವೀಂದ್ರ, ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಕುದುಪಜೆ ಆನಂದ ಸೇರಿದಂತೆ ಹಲಪ್ರಮುಖರು, ನಿವೃತ್ತ ಯೋಧರು, ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.











