
ಕುಶಾಲನಗರ, ಡಿ.1 NEWS DESK : ವಿದ್ಯಾರ್ಥಿಗಳು ತಮ್ಮನ್ನು ಕಲಿಕಾ ಹಂತದಲ್ಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡು ಅಧ್ಯಯನದೊಂದಿಗೆ ಬರವಣಿಗೆ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಭಾರದ್ವಾಜ ಕೆ.ಆನಂದತೀರ್ಥ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ( ಕ.ಸಾ.ಪ.) ಹಾಗೂ ಕ.ಸಾ.ಪ.ಹೆಬ್ಬಾಲೆ ಘಟಕದ ವತಿಯಿಂದ ತಾಲ್ಲೂಕಿನ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಸಂಘದ ಸಹಯೋಗದೊಂದಿಗೆ 69 ನೇ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಸಂಪಾಜೆ ದಿ.ಸಣ್ಣಯ್ಯ ಪಟೇಲ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಭಾಷೆ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಹೇಳಿದರು.
ವಿದ್ಯಾರ್ಥಿಗಳು ಹಿಂಜರಿಜೆ ಮನೋಭಾವ ಬಿಟ್ಟು ತಮ್ಮನ್ನು ಅಧ್ಯಯನ ಮತ್ತು ಬರವಣಿಗೆಯಲ್ಲಿ ತೊಡಗಿಕೊಂಡಲ್ಲಿ ಸಾಹಿತ್ಯದಲ್ಲಿ ಉತ್ತಮ ರೀತಿಯಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಭಾರದ್ವಾಜ್ ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕ.ಸಾ.ಪ.ಸಮಿತಿಯ ಸದಸ್ಯ ಎಂ.ಎನ್.ವೆಂಕಟನಾಯಕ್, ಇಂತಹ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸುವ ಅಗತ್ಯವಿದೆ ಎಂದರು. ಸಾಹಿತ್ಯ ಕ್ಷೇತ್ರ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಸಂಪಾಜೆಯ ಪಟೇಲ್ ಸಣ್ಣಯ್ಯ ಅವರ ಕೊಡುಗೆ ಅಪಾರವಾದುದು ಎಂದು ಬಣ್ಣಿಸಿದರು. ಕಾರ್ಯಕ್ರಮ ಉದ್ಘಾಟಿಸಿದ
ತೊರೆನೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ.ಆರ್.ಸತ್ಯನಾರಾಯಣ ಮಾತನಾಡಿ, ಇಂತಹ ಸಾಹಿತ್ಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ
ಆಸಕ್ತಿ, ಪ್ರತಿಭೆ ಹೊರಹೊಮ್ಮಿಸಲು ಸಹಕಾರಿಯಾಗಿವೆ ಎಂದರು. ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ , ಮಾತೃಭಾಷೆ ಕುರಿತು ಅಭಿಮಾನ ಬೆಳೆಸಿಕೊಂಡು ಇತರೆ ಭಾಷೆಗಳ ಬಗ್ಗೆ ಕೀಳರಿಮೆ ಹೊಂದಬಾರದು ಎಂದು ಹೇಳಿದರು. ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಇಂತಹ ಪ್ರತಿಭೆಗಳು ಸಾಹಿತ್ಯ ಕ್ಷೇತ್ರದಲ್ಲಿ ಬೆಳಗುವಂತಾಗಬೇಕು ಎಂದರು. ಕ.ಸಾ.ಪ.ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಿ ಅವರಲ್ಲಿ ನಾಯಕತ್ವದ ಗುಣ ಹೆಚ್ಚಿಸುವಲ್ಲಿ ನೆರವಾಗುತ್ತದೆ ಎಂದರು. ತಾಲ್ಲೂಕು ಕ.ಸಾ.ಪ.ಪದಾಧಿಕಾರಿಗಾದ ಎಂ.ಎನ್.ಕಾಳಪ್ಪ, ಟಿ.ಬಿ.ಮಂಜುನಾಥ್, ಕೋಶಾಧಿಕಾರಿ ಕೆ.ವಿ.ಉಮೇಶ್, ಕ.ಸಾ.ಪ.ಹೆಬ್ಬಾಲೆ ಘಟಕದ ಕಾರ್ಯದರ್ಶಿ ಎಚ್.ಎನ್.ಸುಬ್ರಹ್ಮಣ್ಯ, ಸಹ ಕಾರ್ಯದರ್ಶಿ ಡಿ.ಕವಿತ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರು ಇದ್ದರು. ಶಿಕ್ಷಕಿ ಕವಿತ ನಿರ್ವಹಿಸಿದರು. ಇದೇ ವೇಳೆ ಕ.ಸಾ.ಪ.ಹೆಬ್ಬಾಲೆ ಘಟಕದ ವತಿಯಿಂದ ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಗೀತ ಗಾಯನ ಸ್ಪರ್ಧೆಯಲ್ಲಿ ವಿಜೇತಗೊಂಡವರಿಗೆ ಬಹುಮಾನ ವಿತರಿಸಲಾಯಿತು.











