
ಕುಶಾಲನಗರ ಡಿ.13 NEWS DESK : ಹನುಮ ಜಯಂತಿ ಅಂಗವಾಗಿ ಕುಶಾಲನಗರ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಮುಂಜಾನೆಯಿಂದಲೇ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು. ನಂತರ ಮಹಾಮಂಗಳಾರತಿ, ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಪ್ರಸಾದ ವಿತರಣೆ ನಡೆಯಿತು. ದೇವಾಲಯದ ಅರ್ಚಕರಾದ ರಾಧಾಕೃಷ್ಣ ಭಟ್ ನೇತೃತ್ವದಲ್ಲಿ ಮಯೂರ ಭಟ್ ಮತ್ತು ಅರ್ಚಕರ ತಂಡದಿಂದ ಪೂಜಾ ಕಾರ್ಯಕ್ರಮಗಳು ಜರುಗಿದವು. ಸಂಜೆ ಅಲಂಕೃತ ಮಂಟಪದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ರಥ ಬೀದಿಯ ಮೂಲಕ ಸಾಗಿ ಬೈಚನಹಳ್ಳಿ ಮಾರಿಯಮ್ಮ ದೇವಾಲಯ ತನಕ ಸಾಗಿತು. ದೇವಾಲಯ ಸೇವಾ ಟ್ರಸ್ಟ್ ಅಧ್ಯಕ್ಷ ವಿ.ಡಿ.ಪುಂಡರಿಕಾಕ್ಷ ಕಾರ್ಯದರ್ಶಿ ರಾಜೀವ್ ಖಜಾಂಚಿ ಜಗದೀಶ್ ಮತ್ತಿತರರು ಇದ್ದರು. ಇದೆ ವೇಳೆ ಹನುಮ ಜಯಂತಿ ಅಂಗವಾಗಿ ಕುಶಾಲನಗರ ಹನುಮಂತೋತ್ಸವ ಆಚರಣೆ ಸಮಿತಿ ಆಶ್ರಯದಲ್ಲಿ ಕುಶಾಲನಗರ ಮತ್ತು ಸುತ್ತಮುತ್ತಲ ಗ್ರಾಮಗಳ 9 ಮಂಟಪಗಳ ಶೋಭಾ ಯಾತ್ರೆ ನಡೆಯಿತು.
ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ಕುಶಾಲನಗರ ಹೆಚ್ ಆರ್ ಪಿ ಕಾಲೋನಿ, ಗುಡ್ಡೆ ಹೊಸೂರು, ಮಾದಾಪಟ್ಟಣ ಬೈಚನಹಳ್ಳಿ ಮುಳ್ಳುಸೋಗೆ ಕೂಡಿಗೆ ಮತ್ತು ಹಾರಂಗಿ ಗ್ರಾಮಗಳ ವಿವಿಧ ಸಮಿತಿಗಳ ಮೂಲಕ ಅಲಂಕೃತ ಮಂಟಪಗಳು ಸಂಜೆ ವೇಳೆ ಕುಶಾಲ್ನಗರ ಪಟ್ಟಣಕ್ಕೆ ಸಾಗಿ ಬಂದವು.
ಕುಶಾಲನಗರ ಗಣಪತಿ ದೇವಾಲಯ ಬಳಿ ಬಂದು ಸೇರಿದ ಮಂಟಪಗಳು ಪ್ರದರ್ಶನಗಳನ್ನು ನೀಡಿದರು. ಅದ್ದೂರಿ ಡಿಜೆ ಯೊಂದಿಗೆ ಹನುಮ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಸಾವಿರಾರು ಹನುಮ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕುಶಾಲನಗರ ಡಿ ವೈ ಎಸ್ ಪಿ ಆರ್ ವಿ ಗಂಗಾಧರಪ್ಪ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತು ಕಲ್ಪಿಸಲಾಗಿತ್ತು.









