ಮಡಿಕೇರಿ ಡಿ.20 NEWS DESK : ನಗರದ ಕೋಟೆ ಆವರಣದಿಂದ ಗಾಂಧಿ ಮೈದಾನದ ವರೆಗೆ ಕೈಗೊಂಡ ಸಿರಿಧಾನ್ಯ ನಡಿಗೆ ಹಾಗೂ ಪಾಕ ಸ್ಪರ್ಧೆಯನ್ನು ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಭಾಗವಹಿಸಿರುವ ರೈತ ಮಹಿಳೆಯರಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಎನ್ಆರ್ಎಲ್ಎಂ ಯೋಜನೆಯಡಿ ಸಹಾಯಧನ ನೀಡಿ ಮಾರಾಟಕ್ಕೆ ಸಂಪರ್ಕ ಕಲ್ಪಿಸುವ ಬಗ್ಗೆ ಸಹಕಾರ ನೀಡುವುದಾಗಿ ತಿಳಿಸಿದರು. ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯ 5 ತಾಲ್ಲೂಕುಗಳಿಂದ ಒಟ್ಟು 58 ಸ್ಪರ್ಧಿಗಳು ಭಾಗವಹಿಸಿ, 90ಕ್ಕೂ ಹೆಚ್ಚು ತಿನಿಸುಗಳನ್ನು ಪ್ರದರ್ಶಿಸಿದರು. ಸಿರಿಧಾನ್ಯದಿಂದ ತಯಾರಿಸಿದ ಸಿಹಿ ತಿನಿಸುಗಳಲ್ಲಿ ಸಿರಿಧಾನ್ಯ ಫಿಗ್(ಅಂಜೂರ) ಡಿಲೈಟ್, ರಾಗಿ ಗಿಣ್ಣು ಹಾಗೂ ಖಾರ ತಿನಿಸುಗಳಲ್ಲಿ ಸಿರಿಧಾನ್ಯ ಪಾಸ್ತಾ ಜೊತೆಗೆ ಕೊಡಗು ಜಿಲ್ಲೆಯ ಮರೆತು ಹೋದ ಖಾದ್ಯಗಳಲ್ಲಿ ಪ್ರಮುಖವಾಗಿ ಎಲಗದ ಮರದ ಚಕ್ಕೆಯ ಗಿಣ್ಣು, ಹುರುಳಿ ಕಡುಬು ಹಾಗೂ ಕೆಂಜಿಗ ಕುಡಿ ಎಲೆ ಚಟ್ನಿ ಪ್ರಮುಖವಾಗಿ ಗಮನಸೆಳೆದವು.











