


ಸಿದ್ದಾಪುರ ಮಾ.17 NEWS DESK : ರಂಜಾನ್ ಉಪವಾಸ ಆಚರಣೆಯ ಅಂಗವಾಗಿ ನೈಮ ಸಂಘಟನೆ ವತಿಯಿಂದ ನೆಲ್ಲಿಹುದಿಕೇರಿಯಲ್ಲಿ ಬೃಹತ್ ಇಫ್ತಾರ್ ಸೌಹಾರ್ದ ಸಂಗಮ ನಡೆಯಿತು. ನೆಲ್ಲಿಹುದಿಕೇರಿಯ ಶಾದಿ ಮಹಲ್ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಲ್ ಖತೀಬ್ ರೌವೂಪ್ ಹುದವಿ ಮಾತನಾಡಿ, ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು. ಜಿ.ಪಂ ಮಾಜಿ ಸದಸ್ಯ ಸುಂಟಿಕೊಪ್ಪದ ಪಿ.ಎಂ.ಅಬ್ದುಲ್ ಲತೀಫ್ ಮಾತನಾಡಿ, ಸೌಹಾರ್ದತೆಗೆ ಹೆಸರುವಾಸಿಯಾದ ಗ್ರಾಮದಲ್ಲಿ ನೈಮ ಸಂಘಟನೆ ಇಫ್ತಾರ್ ಕೂಟವನ್ನು ಆಯೋಜನೆ ಮಾಡುವುದರ ಮೂಲಕ ಬಾಂಧವರನ್ನ ಒಗ್ಗೂಡಿಸಿ ಸೌಹಾರ್ದ ಸಂಗಮ ನಿರ್ಮಾಣ ಮಾಡಿದ್ದಾರೆ. ಶಾಂತಿ ಸಹ ಬಾಳ್ವೆಯ ಸೌಹಾರ್ದ ಸಂಕೇತದ ಆಚರಣೆಗಳನ್ನು ಮಾಡುವುದರ ಮೂಲಕ ಸಹೋದರತ್ವದೊಂದಿಗೆ ಸಹಬಾಳ್ವೆಯ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು. ಸಾಮಾಜಿಕ ಕಾರ್ಯಕರ್ತ ನಿಯಾಜ್ ಮಾತನಾಡಿ, ನೆಲ್ಲಿಹುದಿಕೇರಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆರೋಗ್ಯ, ಶೈಕ್ಷಣಿಕ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಯುವ ಸಮೂಹವನ್ನ ಒಗ್ಗೂಡಿಕೆಯೊಂದಿಗೆ ಸೇವಾ ಮನೋಭಾವದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮಾದರಿಯಾಗಿದ್ದಾರೆ ಎಂದರು.
ಇದೇ ಸಂದರ್ಭ ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಹಾಗೂ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯ ಹಿರಿಯ ಉಪ ನಿರ್ದೇಶಕ ಝೀವಲ್ ಖಾನ್ ನೈಮ ಸಂಘಟನೆ ಶೈಕ್ಷಣಿಕ ಕಾರ್ಯ ಯೋಜನೆಯ ಭಿತ್ತಿಚಿತ್ರ ಬಿಡುಗಡೆಗೊಳಿಸಿದರು. ಮಡಿಕೇರಿ ತಾಲ್ಲೂಕು ಪಂಚಾಯಿತಿ ಲೆಕ್ಕ ಸಹಾಯಕ ಅಧಿಕಾರಿ ಉಸೈನ್ ಸಾಬ್ ಮುಲ್ಲಾ , ಡಿ.ಸಿ.ಸಿ ಸದಸ್ಯ ಕೆ.ಎಂ ಬಸೀರ್, ಗ್ರಾ.ಪಂ ಮಾಜಿ ಅಧ್ಯಕ್ಷ ಎ.ಕೆ.ಹಕೀಂ, ನೈಮ ಸಂಘಟನೆ ಅಧ್ಯಕ್ಷ ನೌಷದ್, ಉಪಾಧ್ಯಕ್ಷ ಅಪ್ಸಲ್, ಕಾರ್ಯದರ್ಶಿ ಮುಸ್ತಾಫಾ, ಜೊತೆ ಕಾರ್ಯದರ್ಶಿ ಜಂಶೀರ್, ಪಿಡಿಓ ಅಬ್ದುಲ್ಲ ಸಹಾಯಕ ಪ್ರಾಧ್ಯಾಪಕ ನೌಶಾದ್ ಸಂಘದ ಸದಸ್ಯರು ಸೇರಿದಂತೆ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಓ.ಎಂ.ಅಬ್ದುಲ್ಲ ಹಾಜಿ, ಕಾರ್ಯದರ್ಶಿ ಅಶ್ರಫ್ ಹಾಜಿ, ಎ.ಕೆ.ಅಬ್ದುಲ್ಲ ಮಣಿ ಮಾಸ್ಟರ್ , ಮಸೀದಿ ಸಮಿತಿಯ ಪ್ರಮುಖರು, ವಿವಿಧ ಸಂಘಟನೆಗಳ ಮುಖಂಡರುಗಳು ಪಾಲ್ಗೊಂಡಿದ್ದರು. ಅರೆಕಾಡು, ನಲ್ವತ್ತೆಕ್ರೆ, ಸಿದ್ದಾಪುರ, ಗುಯ್ಯ, ಒಂಟಿಯಂಗಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಮುದಾಯ ಬಾಂಧವರು ಸೌಹಾರ್ದತವಾಗಿ ಪಾಲ್ಗೊಂಡಿದ್ದರು. ಇಫ್ತಾರ್ ನಲ್ಲಿ ವಿವಿಧ ಬಗ್ಗೆಯ ಹಣ್ಣು ಹಂಪಲು, ತಂಪು ಪಾನೀಯ, ತಿಂಡಿ ತಿನಿಸುಗಳೊಂದಿಗೆ ಬಿರಿಯಾನಿ ಊಟದ ವ್ಯವಸ್ಥೆಯು ಮಾಡಲಾಗಿತ್ತು.