


ಮಡಿಕೇರಿ ಮಾ.17 NEWS DESK : ವಿದ್ಯಾರ್ಥಿಗಳು ಸೂಕ್ತವಾದ ಸಮಯದಲ್ಲಿ ಭವಿಷ್ಯ ರೂಪಿಸಲು ಸರಿಯಾದ ಆಯ್ಕೆಯನ್ನು ಮಾಡಿಕೊಳ್ಳಬೇಕೆಂದು ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ, ಕೊಡಗು ಜಾನಪದ ಪರಿಷತ್ನ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಕರೆ ನೀಡಿದರು. ಮಡಿಕೇರಿಯ ನವೋದಯ ವಿದ್ಯಾಲಯದಲ್ಲಿ ನಡೆದ ಪಿಎಂ ಶ್ರೀ ಪತ್ರಿಕೋದ್ಯಮದ ಕುರಿತ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಯ ತುಂಬಾ ಅಮೂಲ್ಯವಾಗಿದ್ದು, ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಆ ಆಯ್ಕೆ ಬೇರೆಯವರ ಪಾಲಾಗಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಒಬ್ಬ ಪತ್ರಕರ್ತ ಸಮಾಜಕ್ಕೆ ಎಷ್ಟು ಅಗತ್ಯ ಮತ್ತು ಪತ್ರಕರ್ತರ ಜವಾಬ್ದಾರಿಗಳೊಂದಿಗೆ ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು ಎಂದು ಅಭಿಪ್ರಾಯ ವ್ಯಕ್ತಡಿಸಿದರು. ಕೊಡಗು ಚಾನಲ್ನ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ರವಿಕುಮಾರ್ ಮಾತನಾಡಿ, ದೃಶ್ಯ ಮಾಧ್ಯಮ ಎಂದರೆ ಏನು, ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ, ದೃಶ್ಯ ಮಾದ್ಯಮ ಯುವ ಜನತೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿದರು.
ಮಕ್ಕಳು ಪ್ರತೀ ದಿನ ಪತ್ರಿಕೆಗಳ, ಸುದ್ದಿ ವಾಹಿನಿಗಳ ಬಗ್ಗೆ ಗಮನ ಹರಿಸಿ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕೆಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಮನೋಸ್ಥೈರ್ಯವನ್ನು ಹೇಗೆ ಬಲಪಡಿಸಿಕೊಳ್ಳಬೇಕೆಂಬುದನ್ನು ಮತ್ತು ಎಲ್ಲರೊಂದಿಗೆ ಪ್ರೀತಿಯಿಂದ ಹೇಗೆ ಬದುಕಬೇಕೆಂಬುದನ್ನು ರವಿಕುಮಾರ್ ವಿವರಿಸಿದರು. ನವೋದಯ ವಿದ್ಯಾಲಯದ ಪ್ರಭಾರ ಪ್ರಾಚಾರ್ಯರಾದ ಸುಧಾಮಣಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಾಪಕ ಮಾರುತಿ ದಾಸಣ್ಣವರ ಸ್ವಾಗತಿಸಿದರು. ಇಂಗ್ಲಿಷ್ ಅಧ್ಯಾಪಕಿ ಹೀತಾ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳು ಸಂವಹನದಲ್ಲಿ ಪಾಲ್ಗೊಳ್ಳುತ್ತ ಪತ್ರಿಕೋದ್ಯಮ ಕಾರ್ಯಾಗಾರದಲ್ಲಿ ಮಾಹಿತಿ ಪಡೆದುಕೊಂಡರು.