



ಮಡಿಕೇರಿ ಮಾ.18 NEWS DESK : ಒಬ್ಬ ಮಹಿಳಾ ವಿದ್ಯಾವಂತಳಾದರೆ ಆಕೆಯ ಮನೆಯಲ್ಲಿ ಆರೋಗ್ಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಾತಾವರಣ ನಿರ್ಮಾಣ ಆಗಿರುತ್ತದೆ ಎಂದು ಕೃಪಾ ದೇವರಾಜ್ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾನಾಡಿದರು. ಸಮಾನತೆಯ ಪ್ರತಿಪಾದನೆಗಾಗಿ ಅಂತರಾಷ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದಕ್ಕೆ ಮೊದಲ ರಾಜ್ಯಪಾಲರಾಗಿದ್ದ ಸರೋಜಿನಿ ನಾಯ್ದು ಜನ್ಮ ದಿನವಾದ ಫೆ.13ಕ್ಕೆ ಭಾರತದಲ್ಲಿ ಮಹಿಳಾ ದಿನ ಆಚರಿಸಲಾಗುತಿತ್ತು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೋರನ ಸರಸ್ವತಿ ಮಾತನಾಡಿ, ಮಹಿಳಾ ದಿನಾಚರಣೆ ಎಂದರೆ ಇದೊಂದು ಬರೀ ಸಂಭ್ರಮ ಎಂದು ಭಾವಿಸದೇ ಪ್ರಗತಿ, ಸಮೃದ್ಧಿಯ ಇನ್ನೊಂದು ಮುಖ ಎಂದು ಪರಿಗಣಿಸಬೇಕು ಎಂದರು. ನೆಹರು ಯುವ ಕೇಂದ್ರದ ರಂಜಿತಾ, ಕಾಲೇಜಿನ ವಾಣಿಜ್ಯ ಶಾಸ್ತ್ರ ಸಹ ಪ್ರಾಧ್ಯಾಪಕರಾದ ನಮಿತ ಬಿ., ಕಾಲೇಜಿನ ದ್ವಿತೀಯ ದರ್ಜೆ ಸಹಾಯಕರಾದ ಕವಿತ, ಗ್ರಂಥಪಾಲಕರಾದ ಜ್ಯೋತಿ, ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕರಾದ ನಿರ್ಮಲ ಉಪಸ್ಥಿತರಿದ್ದರು. ಸ್ವಾತಿ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಿಯಾ ಸ್ವಾಗತಿಸಿದರು. ಶ್ರಾವ್ಯ ವಂದಿಸಿದರು. ಹೆಚ್.ಪಿ.ನಿರ್ಮಲ ನಿರೂಪಿಸಿದರು. ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.