

ಮಡಿಕೇರಿ NEWS DESK ಮಾ.18 : ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನವಾದ ಮಾ.21ರಂದು ಶಾಂತಿಯುತ ಸತ್ಯಾಗ್ರಹ ನಡೆಸಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರ್ಧರಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಶುಕ್ರವಾರ ಬೆಳಿಗ್ಗೆ 10.30 ಗಂಟೆಯಿಂದ 11.30 ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ನಡೆಸಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯವನ್ನು ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ. ಆದಿಮಸಂಜಾತ ಕೊಡವ ಜನಾಂಗವನ್ನು ಪರಿಶಿಷ್ಟ ಪಂಗಡ (ಎಸ್ಟಿ) ಎಂದು ಗುರುತಿಸಬೇಕು. ಸಿಕ್ಕಿಂನಲ್ಲಿ ಬೌದ್ಧ ಸನ್ಯಾಸಿಗಳಿಗೆ ಮೀಸಲಾದ “ಸಂಘ” ಕ್ಷೇತ್ರದಂತೆಯೇ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರಾತಿನಿಧ್ಯ ನೀಡಬೇಕು. ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಕೊಡವರ ಹಕ್ಕುಗಳನ್ನು ಪರಿಗಣಿಸಬೇಕು. ಬ್ರಿಟಿಷರು, ಹೊರಗಿನ ರಾಜರು ಮತ್ತು ಆಡಳಿತ ವ್ಯವಸ್ಥೆ ವಶಪಡಿಸಿಕೊಂಡ ಅಥವಾ ಹೊರಗಿನವರಿಗೆ ಮಾರಾಟ ಮಾಡಿದ ಪೂರ್ವಜರ ಕೊಡವ ಭೂಮಿಯನ್ನು ಮರಳಿಸಬೇಕು. ಭಾರತೀಯ ಸಂವಿಧಾನದ 8ನೇ ಶೆಡ್ಯೂಲ್ನಲ್ಲಿ ಕೊಡವ ಭಾಷೆಯನ್ನು ಸೇರಿಸಬೇಕು. 4,500 ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿರುವ ಆದಿಮಸಂಜಾತ ಕೊಡವ ಜನಾಂಗದ ಕೊಡವ ಮಾತೃಭಾಷೆಗೆ ಅಧಿಕೃತ ಸ್ಥಾನಮಾನ ಮತ್ತು ರಕ್ಷಣೆಯನ್ನು ನೀಡಬೇಕು. ಕೊಡವ ಜಾನಪದ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಪರಿಗಣಿಸಬೇಕು. ಕೊಡವ ಸಮುದಾಯದ ವಿಶಿಷ್ಟ ಸಾಂಸ್ಕೃತಿಕ ಸಂಪ್ರದಾಯಗಳು ಹಾಗೂ ಪದ್ಧತಿಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಮತ್ತು ರಕ್ಷಣೆಯನ್ನು ನೀಡಬೇಕು. ಭಾರತೀಯ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಸಿಖ್ಖರ ಕಿರ್ಪಣ್ ಗೆ ನೀಡಲಾದ ರಕ್ಷಣೆಯಂತೆಯೇ, ಕೊಡವ ಜನಾಂಗೀಯ ಸಂಸ್ಕಾರ ಬಂದೂಕಿಗೆ ಸಾಂವಿಧಾನಿಕ ರಕ್ಷಣೆ ನೀಡಬೇಕು. ಕಾವೇರಿ ನದಿಯ ಜನ್ಮಸ್ಥಳವನ್ನು ಕೊಡವರ ಪವಿತ್ರ ಯಾತ್ರಾ ಸ್ಥಳವೆಂದು ಗುರುತಿಸಬೇಕು. ಯಹೂದಿಗಳಿಗೆ ಟೆಂಪಲ್ ಮೌಂಟ್ ಮೊರಿಯಾಕ್ಕೆ ಹೋಲುವಂತೆ ಕೊಡವರಿಗೆ ತಲಕಾವೇರಿ ಆಗಿದೆ. 1966 ರ ಹೆಲ್ಸಿಂಕಿ ಕಾನೂನಿನ ಆಧಾರದ ಮೇಲೆ ಕೊಡವಲ್ಯಾಂಡ್ ಗೆ ಕಾವೇರಿ ನೀರಿನ ಪ್ರಮುಖ ಪಾಲನ್ನು ಹಂಚಿಕೆ ಮಾಡಬೇಕು. ಕಾವೇರಿ ನದಿಯನ್ನು ಜೀವಂತ ಅಸ್ತಿತ್ವದ ಸ್ಥಿತಿ ಎಂದು ಪರಿಗಣಿಸಿ ಕಾನೂನುಬದ್ಧವಾಗಿ ರಕ್ಷಿಸಬೇಕು. ಕೊಡವರ ನರಮೇಧದ ದೇವಟ್ ಪರಂಬು, ನಾಲ್ನಾಡ್ ಅರಮನೆ, ನಗರೀಕುಂಡ್ ಮತ್ತು ಮಡಿಕೇರಿ ಕೋಟೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಸ್ಮಾರಕ ಸ್ಮಾರಕವನ್ನು ಸ್ಥಾಪಿಸಬೇಕು. ಅವುಗಳನ್ನು ಅಂತರರಾಷ್ಟ್ರೀಯ ಪರಂಪರೆಯ ತಾಣಗಳಾಗಿ ಗುರುತಿಸಿ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಪರಿಚಯಿಸಬೇಕು. ಕೊಡವ ಮಂದ್ ಗಳನ್ನು ಕೊಡವ ಜನಾಂಗದ ಆಧ್ಯಾತ್ಮಿಕ ಸ್ಥಾನವೆಂದು ಘೋಷಿಸಬೇಕು ಮತ್ತು ಅವುಗಳ ಆಧ್ಯಾತ್ಮಿಕ ಮಹತ್ವವನ್ನು ಗೌರವಿಸಬೇಕು ಎಂದು ಸತ್ಯಾಗ್ರಹದ ಸಂದರ್ಭ ಪ್ರತಿಪಾದಿಸಿ ಹಕ್ಕೊತ್ತಾಯದ ಮನವಿ ಪತ್ರವನ್ನು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಖ್ಯಾತ ಅರ್ಥಶಾಸ್ತ್ರಜ್ಞ, ಹಾರ್ವರ್ಡ್ ವಿದ್ವಾಂಸ ಡಾ.ಸುಬ್ರಮಣಿಯನ್ ಸ್ವಾಮಿ ಹಾಗೂ ಸಿಎನ್ಸಿ ಜಂಟಿಯಾಗಿ ಕರ್ನಾಟಕ ಹೈಕೋರ್ಟ್ ನಲ್ಲಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದು, ಕಾನೂನುಬದ್ಧ ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಶಾಂತಿಯುತ ಸತ್ಯಾಗ್ರಹದಲ್ಲಿ ಸರ್ವ ಕೊಡವ, ಕೊಡವತಿಯರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡು ಕಳೆದ 35 ವರ್ಷಗಳ ಸಿಎನ್ಸಿ ಯ ಹೋರಾಟಕ್ಕೆ ಮತ್ತಷ್ಟು ಬಲ ತುಂಬಬೇಕೆಂದು ಮನವಿ ಮಾಡಿದ್ದಾರೆ.