



ಮಡಿಕೇರಿ ಮಾ.19 NEWS DESK : ಕೊಡಗು ಜಮ್ಮಾಮಲೆ ಅಸೋಸಿಯೇಷನ್ನ ನಿಯೋಗವು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಮೀಸಲು ಅರಣ್ಯದಲ್ಲಿರುವ ಮಲೆ ಹಿಡುವಳಿದಾರರ ಕುರಿತು ವಿಶೇಷ ಮನವಿ ಸಲ್ಲಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾದ ಅಸೋಸಿಯೇಷನ್ನ ಪ್ರಮುಖರು, ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಿದರು. ದಶಕಗಳಿಂದ ಈ ಭಾಗದ ಜನರನ್ನು ಕಾಡುತ್ತಿರುವ ಮಾನವ-ಪ್ರಾಣಿ ಸಂಘರ್ಷಕ್ಕೆ ಅಂತ್ಯ ಹಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭ ಜಮ್ಮಾಮಲೆ ಹಿಡುವಳಿದಾರರು ಅರಣ್ಯ ಇಲಾಖೆಯಿಂದ ನೀಡುವ ಪ್ರಮಾಣ ಪತ್ರದಲ್ಲಿ ಆಂತರಿಕ ಸೂಚನೆ ಅಳವಡಿಸದಂತೆ ಈ ಹಿಂದೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ವಿರಾಜಪೇಟೆ ಡಿಸಿಎಫ್ ಜಗನಾಥ್ ಅವರಿಗೆ ಸೂಚನೆ ನೀಡಿದರೂ ಕೂಡ ಶಾಸಕರ ಸೂಚನೆಯನ್ನು ಕಡೆಗಣಿಸಿ ಕೊಡಗು ಜಮ್ಮಾಮಲೆ ಹಿಡುದಾರರಿಗೆ ಪ್ರಮಾಣ ಪತ್ರದಲ್ಲಿ ಆಂತರಿಕ ಸೂಚನೆ ಅಂಶಗಳನ್ನು ಸೇರಿಸಿ ನೀಡುತ್ತೀದ್ದ ಹಿನ್ನಲೆ ಸಚಿವರಿಗೆ ಕೊಡಗು ಜಮ್ಮಾಮಲೆ ಹಿಡುದಾರರು ವಿವರವಾದ ಮಾಹಿತಿ ನೀಡಿದರು.
ಈ ಹಿನ್ನೆಲೆ ಸಚಿವರಿಂದ ಸಕಾರತ್ಮಕ ಸ್ಪಂದನೆ ಸಿಕ್ಕಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ನಿಯೋಗದಲ್ಲಿ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.