







ಮಡಿಕೇರಿ ಮಾ.20 NEWS DESK : ಮೌಖಿಕ ಪರಂಪರೆಯು ಮಾಯವಾಗಿ ಅಖಿತ ಪರಂಪರೆಯ ಈ ಹೊತ್ತಿನಲ್ಲಿ ಜನಪದವನ್ನು ಉಳಿಸಿ ಬೆಳೆಸಬೇಕಿದೆ ಎಂದು ಹಿರಿಯ ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಇಂದು ನಡೆದ ಜನಪದ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ತನ್ನದೇ ಆದ ಜಾನಪದ ಶ್ರೀಮತಿಕೆ ಹೊಂದಿದೆ. ಕರ್ನಾಟಕದ ಜಾನಪದ ಪರಂಪರೆಯನ್ನು ಕೋಲಾಟ, ಕಂಸಾಳೆ, ಯಕ್ಷಗಾನ, ಡೊಳ್ಳುಕುಣಿತ, ಸುಗ್ಗಿಕುಣಿತ ಮುಂತಾದ ಜಾನಪದ ಕಲ್ಲು, ರಾಗಿಕಲ್ಲು, ರಾಡೆ ಇವೆಲ್ಲ ಮಾಯವಾಗಿ, ಆಧುನಿಕ ವಸ್ತುಗಳು ಅವುಗಳ ಸ್ಥಾನ ಪಡೆದುಕೊಂಡಿದೆ. ಜನಪದದಲ್ಲಿ ಮನುಷ್ಯ ಪ್ರೀತಿ, ಸಮಾಜದ ಮೇಲಿನ ಕಾಳಜಿಯನ್ನು ವಿಶೇಷವಾಗಿ ಕಾಣಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೋರನ ಸರಸ್ಪತಿ ಪ್ರಕಾಶ ಮೌಖಿಕ ಪರಂಪರೆಯು ಬಾಯಿಯಿಂದ ಬಾಯಿಗೆ ಹರಿದು ಬರುವಂಥದ್ದು, ಅದು ಗಾದೆ, ಒಗಟು, ಸೋಬಾನೆ ಹಾಡುಗಳು, ಕಥೆಗಳು, ಕುಣಿತಗಳು, ಆಟಗಳು, ಹೀಗೆ ಹಲವು ಪ್ರಕಾರಗಳಲ್ಲಿ ಒಳಗೊಂಡಿದೆ. ನಮ್ಮ ಜೀವನಾವರ್ತನದ ಮತ್ತು ವಾರ್ಷಿಕಾ ವರ್ತನದ ಎಲ್ಲಾ ಆಚರಣೆಗಳು ಜನಪದದೊಳಡಗಿದೆ. ಅದನ್ನು ಉಳಿಸಿ ಮುಂದಿನ ತಲೆಮಾರಿಗೆ ದಾಟಿಸುವ ಕಾರ್ಯವನ್ನು ನಾವು ಮಾಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಸಾಂಸ್ಕ್ರತಿಕ ಸಮಿತಿ ಸಂಚಾಲಕಿ ನಿರ್ಮಲ, ಕ್ರೀಡಾ ಸಂಚಾಲಕ ರಾಖಿಪೂವಣ್ಣ, ಸತೀಶ್, ನಮಿತ, ಮುದ್ದಣ್ಣ, ಈ.ರಾಜು ಹಾಜರಿದ್ದರು. ಗಾಯನ ಮತ್ತು ತಂಡದವರು ಪ್ರಾರ್ಥಿಸಿದರು. ಸ್ನೇಹಾ ನಿರೂಪಿಸಿದರು. ಪ್ರಿಯಾ ಸ್ವಾಗತಿಸಿ, ಸಿಂಚನ ವಂದಿಸಿದರು. ಜನಪದ ಜೀವನದಲ್ಲಿ ಬಳಕೆಯಲ್ಲಿದ್ದು, ಇಂದು ಕಣ್ಮರೆಯಾದ ಅನೇಕ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಪೂರಕವಾಗಿ ವಿಧ್ಯಾರ್ಥಿಗಳಿಗೆ ಜಾನಪದ ನೃತ್ಯ, ರಂಗೋಲಿ ಮತ್ತು ಜಾನಪದ ಹಾಡುಗಳ ಸ್ಪರ್ಧೆ ಏರ್ಪಡಿಸಲಾಗಿತ್ತು.