







ಮಡಿಕೇರಿ ಮಾ.21 NEWS DESK : ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗಿದ್ದೆ ಕೊಡಗಿನಿಂದ 1937ರ ಅಮರ ಸುಳ್ಯ ಹೋರಾಟ ಅದು ಮೊದಲ ಸ್ವಾತಂತ್ರ್ಯ ಸಂಗ್ರಾಮವಾಗಿದ್ದು, ಆಗ ಸುಳ್ಯ ಪ್ರದೇಶವು ಕೊಡಗು ಜಿಲ್ಲೆಗೆ ಸೇರಿತ್ತು ಎಂದು ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಎಸ್.ಜಿ.ಚೈತ್ರ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಹಕಾರ ಸಂಘಗಳ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಜರುಗಿದ ದಿ.ಗಂಗಾಧರ್ ಶೇಠ್ ಮತ್ತು ಸುಲೋಚನಭಾಯಿ ಸ್ಮಾರಕ ದತ್ತಿ ಮತ್ತು ದಿ. ಡಿ.ಜೆ.ಪದ್ಮನಾಭ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾತನಾಡಿದರು. ಅಂದು ಕೊಡಗಿನ ವ್ಯಾಪ್ತಿ ತುಂಬ ದೊಡ್ಡದಿತ್ತು. ಅಲ್ಲದೆ ಹಾಲೇರಿ ವಂಶದ ಆಡಳಿತ ಮುಗಿದು ಬ್ರಿಟಿಷರ ಆಡಳಿತ ಪ್ರಾರಂಭವಾದಾಗ ಕರ ಶೇಕರಣೆ ವಿಧಾನ ಬದಲಾಯಿಸಲಾಯಿತು. ಹಾಲೇರಿ ವಂಶಸ್ಥರ ಆಡಳಿತದಲ್ಲಿ ವಸ್ತು ರೂಪದಲ್ಲಿ ಕರ ಸಂಗ್ರಹಣೆ ಮಾಡುತ್ತಿದ್ದರು. ಆದರೆ ಬ್ರಿಟಿಷರು ಹಣ ರೂಪದಲ್ಲಿ ಸಂಗ್ರಹ ಮಾಡಲು ಪ್ರಾರಂಭಿಸಿದಾಗ ಸಹಜವಾಗಿಯೇ ಜನರಲ್ಲಿ ಬ್ರಿಟಿಷರ ವಿರುದ್ಧ ಮುನಿಸು ಮೂಡಿತು. ಆ ಸಂದರ್ಭದಲ್ಲಿ ಸ್ವಾಮಿ ಅಪರಾಂಪರ ಮತ್ತು ಇತರರು ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭಿಸಿದರು. ಆದರೆ ಇತಿಹಾಸದಲ್ಲಿ ಮತ್ತು ಪಠ್ಯ ಪುಸ್ತಕಗಳಲ್ಲಿ ಅದೊಂದು ರೈತ ದಂಗೆ ಎಂದು ಬಿಂಬಿಸಲಾಗಿದೆ ಎಂದರು.
ದಿ ಡಿ.ಜೆ.ಪದ್ಮನಾಭ ದತ್ತಿ ನಿಧಿಯ ಆಶಯದಂತೆ ಕೊಡಗಿನ ಜನಪದ ಕಲೆಗಳ ಕುರಿತು ಚೇರಂಬಾಣೆ ಶಿಕ್ಷಕಿ, ನೃತ್ಯ ಕಲಾವಿದೆ ಬೃಂದಾ ಕವನ್ ಕುದುಪಜೆ ಮಾತನಾಡಿ ಕೊಡಗಿನಲ್ಲಿ ಕೃಷಿ ಸಂದರ್ಭದಲ್ಲಿ, ಹಬ್ಬ ಹರಿದಿನಗಳಲ್ಲಿ ಆಡುವ ಮಾತು ಮತ್ತು ಹಾಡುಗಳು ಕೂಡ ಜನಪದೀಯವಾಗಿರುತ್ತದೆ. ಉಮ್ಮತ್ತಾಟ್, ಕೋಲಾಟ್, ಬೊಳಕಾಟ್ ಜನಪ್ರಿಯಗೊಂಡಿದ್ದರೂ ಹತ್ತು ಹಲವು ಜನಪದೀಯ ಕಲೆಗಳು ಕೊಡಗಿನಲ್ಲಿವೆ. ಕೊಂಬಾಟ್ ನಮ್ಮೆ, ದುಡಿ ಕೊಟ್ಟು, ಪುತ್ತರಿ ಪಾಟ, ಎರವ ಕೊಟ್ಟು, ಕಪ್ಪೆ ಆಟ್, ಕುಡಿಯರ ಕುಣಿತ, ಕುರುಬಾಟ, ಕುಂಬುಕೊಟ್ಟ್ ವಾಲಗ, ಜೋಯಿಪಾಟು, ಭೂತ ನೃತ್ಯ, ಡೋಲು ಪಾಟ್, ಪರೆಯಕಳಿ, ಪಿಲಿಯಾಟ್, ಬಾಳೋ ಪಾಟ್, ಬಿಲ್ಲಾಟ್, ವಾಲಗದಾಟ್ ಹೀಗೆ ಹಲವು ರೀತಿಯ ಜನಪದೀಯ ಕಲೆಗಳು ಇವೆ. ಅವುಗಳನ್ನು ಹಬ್ಬ ಹರಿದಿನಗಳಲ್ಲಿ, ಹುತ್ತರಿ ಮಂದಗಳಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ಕೊಡಗಿನಲ್ಲಿ ಜನಪದ ಎನ್ನುವುದು ಜ್ಞಾನಪದವಾಗಿದೆ. ನಮ್ಮ ಹಿರಿಯರು ಪ್ರತಿಯೊಂದು ಆಟಕ್ಕೂ ಜನಪದವನ್ನು ಜೋಡಿಸಿದ್ದಾರೆ. ಉಮ್ಮತ್ತಾಟ್ ಕಾವೇರಿ ಮಾತೆಯನ್ನು ಸ್ತುತಿಸುವ ಹಾಡುಗಳನ್ನು ಹೊಂದಿದ್ದರೆ, ಬೊಳಕಾಟ್ ಹೆಸರೇ ಹೇಳುವಂತೆ ದೀಪದ ಸುತ್ತಲೂ ಮಾಡುವಂತಹ ನೃತ್ಯವಾಗಿದೆ. ಕೋಲಾಟ್ ಹುತ್ತರಿ ಸಂದರ್ಭದಲ್ಲಿ ಕೋಲುಮಂದುಗಳಲ್ಲಿ ಆಡುವಂತಹ ಒಂದು ಕಲೆಯಾಗಿದೆ. ಬಾಳೋಪಾಟ್ ನಲ್ಲಿ ಹುಟ್ಟಿನಿಂದ ಸಾವಿನವರೆಗಿನ ಕಥೆಯನ್ನು ಸಾದರಪಡಿಸಲಾಗುತ್ತದೆ. ಜೋಯಿಪಾಟ್ – ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯ ಕಾಲಕ್ಕೆ ಕುರಿತಂತೆ ವಿಚಾರ ಮಂಡಿಸುತ್ತದೆ. ಪರೆಯಕಳಿ ಬಿದುರಿನ ಬೆತ್ತದಿಂದ ಆಡುವ ಆಟ ಯುದ್ಧದ ನೆನಪನ್ನು ತರುತ್ತದೆ ಎಂದು ಕೊಡಗಿನ ಜನಪದದ ಸಂಪೂರ್ಣ ವಿವರಣೆಯಿತ್ತರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಗೋಣಿಕೊಪ್ಪಲಿನ ಎಂ.ಜಿ ಮೋಹನ್ ತಮ್ಮ ತಂದೆ ತಾಯಿ ದಿ. ಸುಲೋಚನಾ ಬಾಯಿ ಗಂಗಾಧರ್ ಶೇಟ್ ಹೆಸರಿನಲ್ಲಿ ದತ್ತಿ ಸ್ಥಾಪಿಸಿದ್ದು, ಕೊಡಗಿನ ಸ್ವಾತಂತ್ರ್ಯ ಯೋಧರ ಕುರಿತು ವಿದ್ಯಾರ್ಥಿಗಳಿಗೆ ತಿಳಿಪಡಿಸುವ ದತ್ತಿ ಉಪನ್ಯಾಸ ನೀಡುವಂತೆ ಕೋರಿದರು. ಎಂ.ಜಿ.ಮೋಹನ್ ಗೋಣಿಕೊಪ್ಪಲಿನ ಜಯಲಕ್ಷ್ಮಿ ಜುವೆಲ್ಲರಿಯ ಮಾಲೀಕರಾಗಿದ್ದು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಾರೆ . ಗೋಣಿಕೊಪ್ಪಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದು ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭ ತಮ್ಮ ತಂದೆ ಡಿ.ಜೆಪದ್ಮನಾಭ ರವರ ಹೆಸರಿನಲ್ಲಿ ದತ್ತಿ ಸ್ಥಾಪಿಸಿದ್ದು ಕೊಡಗಿನ ಜನಪದ ಕಲೆ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ಮೂಲಕ ತಿಳಿಯಪಡಿಸುವುದು ಇದರ ಉದ್ದೇಶವಾಗಿದೆ. ಡಿ.ಜೆ ಪದ್ಮನಾಭರವರು ಕೊಡಗಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅನ್ನು ಸ್ಥಾಪಿಸಿ ಕಟ್ಟಿ ಬೆಳೆಸುವಲ್ಲಿ ಕೆಲಸ ಮಾಡಿದವರು. ಸಾಹಿತ್ಯ ಪರಿಷತ್ತಿಗೆ 60 ಸೆಂಟು ಜಾಗವನ್ನು ಸರಕಾರದಿಂದ ಮಂಜೂರು ಮಾಡಿಸಿಕೊಂಡವರು ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಸಹಕಾರ ಸಂಘಗಳ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ. ರೇಣುಕಾ ಆರ್ ಎಸ್ ರವರು ಮಾತನಾಡುತ್ತಾ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಿಗೆ ದತ್ತಿ ಕಾರ್ಯಕ್ರಮಗಳ ಮೂಲಕ ಕನ್ನಡ ನಾಡು ನುಡಿಯ ಪರಿಚಯ ಮಾಡಿ ಕೊಡುತ್ತಿರುವುದು ಶ್ಲಾಘನೀಯ ವಿಚಾರ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದತ್ತಿದಾನಿಗಳಾದ ಎಂ.ಜಿ ಮೋಹನ್, ಪ್ರೊ. ದಂಬೆಕೊಡಿ ಸುಶೀಲ ಸುಬ್ರಮಣಿ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಅಂಬೇಕಲ್ ನವೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಎನ್.ಪುರುಷೋತ್ತಮ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕೋಶಾಧಿಕಾರಿ ವಾಸು ರೈ, ಮೂರ್ನಾಡು ಹೋಬಳಿ ಗೌರವ ಕಾರ್ಯದರ್ಶಿಗಳಾದ ಕಟ್ಟೆಮನೆ ಮಹಾಲಕ್ಷ್ಮಿ, ಕೋಶಾಧಿಕಾರಿ ಅಮ್ಮಾಟಂಡ ಬೃಂದ, ಮೂಡಗದ್ದೆ ವಿಕ್ರಂ, ಸಹಕಾರಿ ತರಬೇತಿ ಕೇಂದ್ರದ ಉಪನ್ಯಾಸಕರುಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಸಂಜೀವ್ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾರ್ಥಿ ಸಂಗಪ್ಪ ವಂದಿಸಿದರು.