


ಮಡಿಕೇರಿ ಮಾ.24 NEWS DESK : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಮಾ.25 ಮತ್ತು 26 ರಂದು “ಜೀವವೈವಿದ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಹವಾಮಾನ ಬದಲಾವಣೆಯ ತಗ್ಗಿಸುವಿಕೆ” ಕುರಿತಾದ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಅರಣ್ಯ ಮಹಾವಿದ್ಯಾಲಯದ ಡೀನ್ ಹಾಗೂ ಸಮ್ಮೇಳನ ಆಯೋಜ ಮಂಡಳಿಯ ಅಧ್ಯಕ್ಷ ಡಾ.ಜಿ.ಎಂ.ದೇವಗಿರಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಸಮ್ಮೇಳನದಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯಗಳು, ವೈಜ್ಞಾನಿಕ ಸಂಸ್ಥೆಗಳು ಮತ್ತು ಜೀವವೈವಿದ್ಯತೆಯ ಕುರಿತು ಸಂಶೋಧನೆ, ಅಕ್ಷಣದಲ್ಲಿ ತೊಡಗಿಕೊಂಡಿರುವ ವಿಜ್ಞಾನಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಮ್ಮೇಳನದಲ್ಲಿ ಜೀವವೈವಿದ್ಯತೆ : ಪ್ರಸ್ತುತ ಸ್ಥಿತಿ, ಅಪಾಯಗಳು ಹಾಗೂ ಸಂರಕ್ಷಣೆ, ಜೈವಿಕ ಪರಿಶೋಧನೆ ಮತು ಜೈವಿಕ ಸಂಪನ್ಮೂಲಗಳ ಸುಸ್ತಿರ ಬಳಕೆ, ಹವಾಮಾನ ಬದಲಾವಣೆ : ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಸವಾಲುಗಳು, ಹವಾಮಾನ ಬದಲಾವಣೆ ಎದುರಿಸಲು ಪರ್ಯಾಯ ಶಕ್ತಿ ಮೂಲಗಳು ಎಂಬ ವಿಷಯಗಳ ಬಗ್ಗೆ ಪ್ರಬಂಧ ಮಂಡನೆ, ವಿಚಾರ ವಿನಿಮಯ. ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾಗಿರುವ ಸಂಶೋಧನೆಗಳ ಬಗ್ಗೆ ಚರ್ಚೆಗಳು ಇರಲಿವೆ ಎಂದು ತಿಳಿಸಿದರು. ಒಟ್ಟು 100ಕ್ಕೂ ಅಧಿಕ ‘ವಿಜ್ಞಾನಿಗಳು ಪಾಲ್ಗೊಂಡು, ವಿವಿಧ ವಿಷಯಗಳ ಒಟ್ಟು 123 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಪಾರಿಸರಿಕ ವಿಷಯದಲ್ಲಿ ನುರಿತ 10 ತಜ್ಞರು ಸಂಬಂದಿಸಿದ ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಲಿದ್ದಾರೆ ಎಂದರು. ಸಮ್ಮೇಳನವನ್ನು ಮಾ.25 ರಂದು ಬೆಳಿಗ್ಗೆ 9.30 ಗಂಟೆಗೆ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್.ಸಿ.ಜಗದೀಶ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ (ಭಾ.ಅ.ಸೇ) ಸದಸ್ಯ ಕಾರ್ಯದರ್ಶಿ ಎನ್.ಎಸ್.ಲಿಂಗರಾಜ್ ಭಾಗವಹಿಸಲಿದ್ದಾರೆ. ಸಮ್ಮೇಳನದ ಪ್ರಬಂಧ ಸಾರಾಂಶದ ಪುಸ್ತಕವನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ನ ಕಾರ್ಯದರ್ಶಿ ಡಾ. ಯು.ಟಿ.ವಿಜಯ್ ಬಿಡುಗಡೆಗೊಳಿಸಲಿದ್ದಾರೆ. ಅತಿಥಿಗಳಾಗಿ ಬೆಂಗಳೂರು ಬಿ.ಬಿ.ಎಂ.ಪಿ ಉಪಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ.ಸ್ವಾಮಿ, ಕೆ.ಶಿ.ನಾ.ಕೃ.ತೋ.ವಿ.ವಿ ಯ ಉನ್ನತಾಧಿಕಾರಿ ಹಾಗೂ ಶಿಕ್ಷಣ ನಿರ್ದೇಶಕಿ ಡಾ. ಬಿ.ಹೇಮಳಾ ನಾಯಕ್, ಕುಲಸಚಿವ ಡಾ.ಕೆ.ಸಿ.ಶಶಿಧರ್, ಸಂಶೋಧನಾ ನಿರ್ದೇಶಕ ಡಾ.ಬಿ.ಎಂ.ದುಶ್ಯಂತ್ ಕುಮಾರ್, ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ, ಪಿಜಿಎಸ್ ಡೀನ್ ಡಾ.ಎಸ್.ಯು.ಪಾಟೀಲ್, ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ನಾರಾಯಣ ಎಸ್.ಮಾವರ್ಕರ್ ಪಾಲ್ಗೊಳ್ಳಲಿದ್ದಾರೆ ಎಂದರು. ಮಾ.26 ರಂದು ಮಧ್ಯಾಹ್ನ 3.30 ಗಂಟೆಗೆ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು, ನೂತನವಾಗಿ ಸ್ಥಾಪಿತವಾಗಿರುವ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಕೆ.ಎಮ್.ಹರಿಣಿಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ (ಭಾ.ಆ.ಸೆ) ಉಪಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಸಿ.ಬಾಲಚಂದ್ರ, ಪಾಲಿಬೆಟ್ಟ ಟಾಟಾ ಕಾಫಿ ಲಿಮಿಟೆಡ್ನ ಜನರಲ್ ಮ್ಯಾನೇಜರ್ ಬಿ.ಜಿ.ಪೊನ್ನಪ್ಪ, ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಸುರೇಶ್ ಡಿ.ಎಕಬೋಟೆ, ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಶ್ರೀನಿವಾಸ್, ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ತಿಪ್ಪೇಶ್ ಡಿ., ಆಡಳಿತಾಧಿಕಾರಿಗಳು ಬಿ.ಸಿ.ಧನಂಜಯ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಹಲವಾರು ವಿಚಾರಗಳ ಕುರಿತು ಚರ್ಚೆಗಳಾಗಿ, ಜೀವಿವೈವಿದೈತೆಯ ಸಂರಕ್ಷಣೆಗೆ ಹಲವು ಶಿಫಾರಸುಗಳು ಹೊರಬರಲಿದ್ದು, ಮುಂದಿನ ಸಂಶೋಧನೆಗಳಿಗೆ ಈ ಶಿಫಾರಸುಗಳು ದಾರಿದೀಪವಾಗವುದೆಂದು ದೇವಗಿರಿ ಅಭಿಪ್ರಾಯ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಹಾಗೂ ಸಹಾಯಕ ಉಪನ್ಯಾಸಕ ಡಾ. ಬಿ.ಎನ್.ಸತೀಶ್, ಡಾ.ಆರ್.ಎನ್.ಕೆಂಚರೆಡ್ಡಿ ಉಪಸ್ಥಿತರಿದ್ದರು.