


ನಾಪೋಕ್ಲು ಮಾ.25 NEWS DESK : ವೆಸ್ಟ್ ಕೊಳಕೇರಿ ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವವು ಸಾಂಪ್ರದಾಯಿಕವಾಗಿ ನಡೆಯಿತು. ಉತ್ಸವದ ಅಂಗವಾಗಿ ದೇವತಕ್ಕರಾದ ಕಾಂಡಂಡ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ಭಾನುವಾರ ಪಟ್ಟಣಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಬೆಳಿಗ್ಗೆ ದೇವರ ದರ್ಶನ, ಬಳಿಕ ಎತ್ತುಪೋರಾಟ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಜರುಗಿತು. ಮಧ್ಯಾಹ್ನದ ಬಳಿಕ ಗ್ರಾಮಸ್ಥರಿಂದ ಬೊಳಕಾಟ್ ಪ್ರದರ್ಶನ ದೇವರ ಪ್ರದರ್ಶನ ನೃತ್ಯ ಮಹೋತ್ಸವವನ್ನು ಬಳಿಕ ನೆರೆದಿದ್ದ ಭಕ್ತರಿಗೆ ಲಘು ಉಪಹಾರ ಸಂತರ್ಪಣೆ ನಡೆಯಿತು. ಸೋಮವಾರ ಆಟ್, ಪಾಟ್ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವರ ಅವಭೃತ ಸ್ನಾನ, ಪ್ರದರ್ಶನ ನೃತ್ಯ ಜರುಗಿತು. ಶುದ್ಧ ಕಲಶ ಹಾಗೂ ಬೇಟೆಗಾರ ದೇವರ ಉತ್ಸವ ಜರುಗಲಿದೆ. ದೇವರ ಪೂಜಾ ವಿಧಿ ವಿಧಾನವನ್ನು ದೇವಾಲಯದ ಮುಖ್ಯ ಅರ್ಚಕ ಸೀತಾರಾಮ್ ಭಟ್, ತಂತ್ರಿಗಳಾಗಿ ಜಗದೀಶ್, ರಾಘವೇಂದ್ರ ಭಟ್ ಹಾಗೂ ಸತ್ಯಮೂರ್ತಿ ಸರಳಾಯ ನೆರವೇರಿಸಿ ಕೊಟ್ಟರು. ಉತ್ಸವದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಕುಂಡಿಯೊಳಂಡ ರಮೇಶ್ ಮುದ್ದಯ್ಯ, ಉಪಾಧ್ಯಕ್ಷ ಕಾಂಡಂಡ ಜಯ ಕರಂಬಯ್ಯ, ಖಜಾಂಜಿ ಕನ್ನಂಬೀರ ರವಿ ಚಿನ್ನಪ್ಪ, ಕಾರ್ಯದರ್ಶಿ ಕುಂಡಿಯೊಳಂಡ ವಿಷು ಪೂವಯ್ಯ. ಆಡಳಿತ ಮಂಡಳಿ ನಿರ್ದೇಶಕರು, ತಕ್ಕ ಮುಖ್ಯಸ್ಥರು ಪಾಲ್ಗೊಂಡಿದ್ದರು. ಭಕ್ತರು ಶ್ರದ್ಧಾಭಕ್ತಿಯಿಂದ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ಹರಕೆ, ಕಾಣಿಕೆ ಸೇವೆಯನ್ನು ನೆರವೇರಿಸಿಕೊಂಡರು.
ವರದಿ : ದುಗ್ಗಳ ಸದಾನಂದ.