






ನಾಪೋಕ್ಲು ಏ.7 NEWS DESK : ಶಿಸ್ತು, ಸಂಯಮ, ಉತ್ತಮ ಗುಣ ನಡತೆಗಳನ್ನು ಹೊಂದಿರುವ ವಿದ್ಯಾರ್ಥಿಗಳಿಂದ ಕೂಡಿದ ಶಾಲೆಯು ಉತ್ತಮ ಶಾಲೆ ಆಗಿರುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಚೌರಿರ ಡಾ.ಜಗತ್ ತಿಮ್ಮಯ್ಯ ಹೇಳಿದರು. ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲೆಯ ವತಿಯಿಂದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಹತ್ತನೇ ತರಗತಿ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಉತ್ತಮವಾದ ಶಾಲೆಗಳಿವೆ. ಮಕ್ಕಳನ್ನು ತಿದ್ದಿ ಸೂಕ್ತ ಮಾರ್ಗದರ್ಶನ ನೀಡುವ ಶಿಕ್ಷಕರುಗಳಿಗಿಂತ ಆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಪೂರ್ಣ ವಿದ್ಯಾರ್ಥಿಗಳಿಂದ ಶಾಲೆಯು ಉತ್ತಮವಾಗಿರುತ್ತದೆ. ಪೋಷಕರು ಅಂತಹ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸಬೇಕು ಎಂದರು. ಪರಿಸರ ಸಂರಕ್ಷಣೆಯು ವಿದ್ಯಾರ್ಥಿಗಳು ಮುಖ್ಯವಾಗಿ ರೂಡಿಸಿಕೊಳ್ಳಬೇಕಾದ ಅಂಶವಾಗಿದೆ. ಇಂದು ಕಾವೇರಿ ನದಿ ತಟ ಬಹಳ ಕಲುಷಿತವಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಕಂಡುಬರುತ್ತದೆ. ನಾವು ವಾಸಿಸುವ ಪ್ರದೇಶ ಉತ್ತಮವಾಗಿರಬೇಕು. ಗಾಳಿ ನೀರು, ಮಣ್ಣು, ಮಲೀನವಾಗದಂತೆ ನೋಡಿಕೊಳ್ಳಬೇಕಾದ್ದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಅದನ್ನು ವಿದ್ಯಾರ್ಥಿಗಳು ಅರಿತುಕೊಂಡು ಪರಿಸರ ಸ್ವಚ್ಛತೆಗೆ ಗಮನ ಹರಿಸಬೇಕು ಎಂದರು. ಅಂಕುರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಕೇಟೋಳಿರ ರತ್ನ ಚರ್ಮಣ್ಣ ಮಾತನಾಡಿ, ವಿದ್ಯಾರ್ಥಿಗಳು ತಪ್ಪು ಮಾಡುವುದು ಸಹಜ ವ್ಯಕ್ತಿಗಳು ತಪ್ಪು ಮಾಡುತ್ತಾರೆ. ಆ ತಪ್ಪುಗಳನ್ನು ತಿದ್ದಿಕೊಂಡು ಜೀವನದಲ್ಲಿ ಮುಂದುವರಿಯಬೇಕು ವಿದ್ಯಾರ್ಥಿಗಳು 10ನೇ ತರಗತಿಯವರೆಗೆ ಮಕ್ಕಳಾಗಿರಬೇಕು ಮಕ್ಕಳ ಜೀವನ ಅಮೂಲ್ಯವಾದದು ಉತ್ತಮ ವ್ಯಕ್ತಿತ್ವವನ್ನು ಮಕ್ಕಳು ರೂಪಿಸಿಕೊಳ್ಳಲು ಶಾಲೆ ಸಹಕಾರಿಯಾಗಿದೆ ವಿದ್ಯಾರ್ಥಿಗಳು ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಶಾಲೆಯು ಕಲಿಸಿಕೊಟ್ಟಿದೆ. ತಮ್ಮ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶಿಯಾಗಿರುವ ಶಾಲೆಯ ಬಗ್ಗೆ ವಿದ್ಯಾರ್ಥಿಗಳು ಪೆÇೀಷಕರು ಉತ್ತಮ ಪ್ರೀತಿ ಬಾಂಧವ್ಯವನ್ನು ಹೊಂದಿರಬೇಕು ಎಂದು ಮಕ್ಕಳಿಗೆ ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅಂಕುರ್ ಶಾಲೆಯ ಅಧ್ಯಕ್ಷರಾದ ಕೇಟೋಳಿರ ಚರ್ಮಣ್ಣ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ನಿರ್ಗಮಿತ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಅರ್ಹತಾ ಪತ್ರವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭ ಟ್ರಸ್ಟಿ ಕೇಟೋಳಿರ ಗಾಯನ್ ಗೌರಮ್ಮ, ವಿದ್ಯಾರ್ಥಿಗಳ ಪೋಷಕರು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಿಂಚನ ಪಿ.ಸಿ.ಸ್ವಾಗತಿಸಿದರು, ಬಿ.ಕೆ ಕನ್ನಿಕಾ ಮತ್ತು ಬಿ.ಎನ್ ಸೋಮಣ್ಣ ನಿರೂಪಿಸಿದರು. ಗಾನ್ಯ ಸುಬ್ಬಯ್ಯ ವಂದಿಸಿದರು.
ವರದಿ : ದುಗ್ಗಳ ಸದಾನಂದ.