

ನಾಪೋಕ್ಲು ಏ.7 NEWS DESK : ಕೊಡಗಿನ ಪ್ರಪ್ರಥಮ ಪೊನ್ನು ಮುತ್ತಪ್ಪ ದೇವಾಲಯ ಹಾಗೂ ಎರಡನೇ ಪರಶಿನಿ ಎಂದು ಪ್ರಖ್ಯಾತವಾಗಿರುವ ನಾಪೋಕ್ಲುವಿನ ಶ್ರೀ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವವು ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿತು. ಪೈಂಗುತ್ತಿ ಹಾಗೂ ಶ್ರೀ ಮುತ್ತಪ್ಪ ದೇವರ ಕಳಸ ನಡೆಯಿತು. ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಪ್ರಖ್ಯಾತ ಕೇರಳ ಚಂಡೆಗಳೊಂದಿಗೆ ನಾಪೋಕ್ಲು ಪೇಟೆಯ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆದು ನಂತರ ದೇವಾಲಯಕ್ಕೆ ಆಗಮನವಾಯಿತು. ಈ ಸಂದರ್ಭ ಸಿಡಿಮದ್ದು ಪ್ರದರ್ಶನ, ಕೇರಳದ ನೃತ್ಯ, ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಂಟಪ ಮತ್ತಿತರ ಮನರಂಜನಾ ಕಾರ್ಯಕ್ರಮಗಳು ನಡೆದು ಜನಮನ ಆಕರ್ಷಿಸಿದವು. ರಾತ್ರಿ ಕುಟ್ಟಿಚಾತ ಮತ್ತು ಗುಳಿಗ ದೇವರ ವೆಳ್ಳಾಟಂ ನಡೆಯಿತು. ಉತ್ಸವದ ಅಂಗವಾಗಿ ಕೇರಳ ನೀಲೇಶ್ವರದ ಮುರಳಿ ಕೃಷ್ಣ ತಂತ್ರಿ ಅವರಿಂದ ಗಣಪತಿ ಹೋಮ ಮತ್ತು ಶುದ್ಧ ಕಳಸ ನಡೆಯಿತು. ರಾತ್ರಿ ಗುರು ಪೂಜೆ ಹಾಗೂ ಶ್ರೀದೇವಿ ಪೂಜೆ ನಡೆಯಿತು. ಗುಳಿಗ ಕೋಲ ಬಳಿಕ ಕುಟ್ಟಿಚಾತ ಕೋಲ ಹಾಗೂ ತಿರುವಪ್ಪನ್ ಮತ್ತು ಮುತ್ತಪ್ಪ ತೆರೆ ಜರುಗಿದವು. ಉತ್ಸವದ ಅಂಗವಾಗಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ ಚಂದ್ರನ್, ಉಪಾಧ್ಯಕ್ಷರಾದ ಎಂ.ಕೆ.ತಂಗ, ಚಿನ್ನ, ಕಾರ್ಯದರ್ಶಿ ರಾಜೀವನ್ ,ಉಪ ಕಾರ್ಯದರ್ಶಿ ಮನೋಹರ್, ಖಜಾಂಚಿ ಕಿಶೋರ್ ಪಿ.ಸಿ, ದೇವಾಲಯದ ಪೂಜಾರಿ ಹರಿದಾಸ್ ಮತ್ತು ಆಡಳಿತ ಮಂಡಳಿ ಸದಸ್ಯರು ಊರ ಹಾಗೂ ಪರ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.