






ಮಡಿಕೇರಿ ಏ.10 NEWS DESK : ಸಮಾಜದಲ್ಲಿ ಎಲ್ಲರೂ ಬದುಕಬೇಕು, ಹಾಗೆಯೇ ಇತರರನ್ನೂ ಬದುಕಲು ಬಿಡಬೇಕು’ ಎಂಬುದು ಭಗವಾನ್ ಮಹಾವೀರರ ಸಂದೇಶವಾಗಿದೆ ಎಂದು ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಇಂದು ನಡೆದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಗವಾನ್ ಮಹಾವೀರರು ಅಹಿಂಸಾ ಧರ್ಮದ ಪ್ರವರ್ತಕರಾಗಿದ್ದು, ಸನ್ಮತಿ, ವರ್ಧಮಾನ ಹಾಗೂ ವೀರ ಹೆಸರುಗಳಿಂದ ಮಹಾವೀರರನ್ನು ಕರೆಯುತ್ತಾರೆ ಎಂದು ತಿಳಿಸಿದರು. ಕ್ರಿ.ಪೂ.6ನೇ ಶತಮಾನದಲ್ಲಿ ರಾಜಪುತ್ರನಾಗಿ ಜನಿಸಿದರೂ, ಜನ ಕಲ್ಯಾಣಕ್ಕಾಗಿ ರಾಜತ್ವವನ್ನೂ ತ್ಯಾಗಮಾಡಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಭಗವಾನ್ ಮಹಾವೀರರು ಜೀವನ ನಡೆಸಿದರು ಎಂದು ಉಪ ವಿಭಾಗಾಧಿಕಾರಿ ಹೇಳಿದರು. ಭಗವಾನ್ ಮಹಾವೀರರು ಸತ್ಯ, ಅಹಿಂಸೆ, ಅಪರಿಗ್ರಹ, ಅಸ್ತೇಯ ಮತ್ತು ಬ್ರಹ್ಮಚರ್ಯ ಈ ಪಂಚ ವ್ರತಗಳ ಅನುಷ್ಠಾನದ ಅಡಿಪಾಯ ಹಾಕಿದರು ಎಂದು ಅವರು ವಿವರಿಸಿದರು. ಅಹಿಂಸೆಯೇ ಪರಮ ಧರ್ಮ ಎಂಬುದು ದಿವ್ಯ ಮಂತ್ರವಾಗಿ ಅಳವಡಿಸಿಕೊಂಡಿದ್ದ ಮಹಾವೀರರು ಅದರಂತೆ ನಡೆದುಕೊಂಡರು ಎಂದು ತಿಳಿಸಿದರು. ಪ್ರತಿಯೊಂದು ಜೀವಿಯೂ ಸಂತೋಷವಾಗಿರಲು ಬಯಸುತ್ತದೆ. ಯಾವುದೇ ಜೀವಿಯು ನೋವನ್ನು ಬಯಸೋದಿಲ್ಲ ಎಂಬ ಬಗ್ಗೆ ಭಗವಾನ್ ಮಹಾವೀರರು ಒತ್ತಿ ಹೇಳಿದ್ದಾರೆ ಎಂದು ನುಡಿದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಪುಣ್ಯ ಭೂಮಿಯಲ್ಲಿ ಕಾಲದಿಂದ ಕಾಲಕ್ಕೆ ಅನೇಕ ಪುಣ್ಯರನ್ನು ಕಂಡ ಶ್ರೇಷ್ಠತೆ ಹೊಂದಿದೆ. ಇಂತಹ ನಾಡಿನಲ್ಲಿ ಆಗಿ ಹೋಗಿರುವ ಋಷಿ ಮುನಿಗಳು, ಶರಣರು, ಸಂತರು ಹಾಗೂ ಮಹನೀಯರ ಸಂದೇಶಗಳನ್ನು ಪಾಲನೆ ಮಾಡುವ ಮೂಲಕ ನಾಡನ್ನು ಇನ್ನಷ್ಟು ಪುಣ್ಯಮಯ ಗೊಳಿಸಬೇಕೆಂದು ಹೇಳಿದರು. ಕ್ರಿ.ಪೂ.600 ರಲ್ಲಿ ಬೋಧಿಸಿದ ಮಹಾವೀರರ ತತ್ವಾದರ್ಶಗಳು ಹನ್ನೆರಡನೇ ಶತಮಾನದ ಸ್ಪೂರ್ತಿಯಾಗಿದ್ದರಿಂದಲೇ ಬಸವೇಶ್ವರರು ಕೂಡ ಶಾಂತಿ, ಸಮಾನತೆ ಹಾಗೂ ಅಹಿಂಸೆಯನ್ನೇ ಬೋಧಿಸಿದರು ಎಂದು ನುಡಿದರು. ಉಸಿರಾಡುವಾಗ ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳು ನಶಿಸಬಾರದು ಎಂದು ಬಾಯಿಗೆ ಬಟ್ಟೆ ಕಟ್ಟಿ ಉಸಿರಾಡಿದರು. ಸಂಪತ್ತಿನ ಕ್ರೋಢೀಕರಣ ವಿರೋಧಿಸಿದ ಜೈನ ಧರ್ಮೀಯರು, ಸತ್ಯಶೀಲವಾದ ಜೀವನಕ್ಕೆ ಆದ್ಯತೆ ಕೊಟ್ಟರು ಎಂದು ಕೆ.ಎಸ್.ಮೂರ್ತಿ ಹೇಳಿದರು. ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ ಮಾತನಾಡಿ, ಮನುಷ್ಯರ ಜೀವನ ಉತ್ತಮವಾಗಲು ರತ್ನತ್ರಯಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರೊತ್ರ್ಯಗಳನ್ನು ಪಾಲಿಸಬೇಕು ಎಂದಿದ್ದರು ಎಂದು ನುಡಿದರು. ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿದ್ದರಾಜು ಬೆಳ್ಳಯ್ಯ ಮಾತನಾಡಿ, ಭಗವಾನ್ ಮಹಾವೀರರು ಮನುಷ್ಯನ ಸರಿಯಾದ ನಡವಳಿಕೆಗೆ ಹೆಚ್ಚು ಒತ್ತು ನೀಡಿದ್ದರು ಎಂದು ನುಡಿದರು. ಪ್ರಮುಖರಾದ ಎಚ್.ಎಲ್.ದಿವಾಕರ ಮಹಾವೀರರ ಆದರ್ಶ ಹಾಗೂ ಅಹಿಂಸಾ ತತ್ವಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು, ಬಿ.ಸಿ.ಶಂಕರಯ್ಯ ನಾಡಗೀತೆ ಹಾಡಿದರು, ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.