







ಸುಂಟಿಕೊಪ್ಪ ಮಾ.11 NEWS DESK : ಪಟ್ಟಣದಲ್ಲಿ ಹೆಚ್ಚಿದ ಟ್ರಾಫಿಕ್-ಪಾರ್ಕಿಂಗ್ ಸಮಸ್ಯೆ, ಹೆದ್ದಾರಿ ಬದಿಯಲ್ಲಿ ಮಾಂಸ ಮಾರಾಟ, ತ್ಯಾಜ್ಯ ವಿಲೇವಾರಿ ವಿಳಂಬ, ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸೇರಿದಂತೆ ಹತ್ತಾರು ಸಮಸ್ಯೆಗಳು ಅನಾವರಣಗೊಂಡಿತು. ಕೊಡಗು ಪತ್ರತರ್ಕರ ಸಂಘದ ಕುಶಾಲನಗರ ತಾಲ್ಲೂಕು ಘಟಕದಿಂದ ಸುಂಟಿಕೊಪ್ಪದ ವಿಎಸ್ಎಸ್ಎನ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಅಧ್ಯಕ್ಷತೆಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಂಬಂಧಿಸಿದವರ ಗಮನ ಸೆಳೆದರು. ಪ್ರಶ್ನೆಗಳನ್ನು ಆಲಿಸಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಮಾತನಾಡಿ, ಗ್ರಾಮ ಪಂಚಾಯತಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ತಯಾರಾಗಿದೆ. ಗ್ರಾಪಂ ವ್ಯಾಪ್ತಿಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಪಂ ನೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಇದಲ್ಲದೆ 29 ಇಲಾಖೆಗಳು ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸುಂಟಿಕೊಪ್ಪದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ಹೊಸ ಮಾರುಕಟ್ಟೆ ನಿರ್ಮಿಸಲಾಗುತ್ತಿದ್ದು, ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಯ ಜೊತೆಗೂಡಿ ರಸ್ತೆಯ ಒಂದು ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವು ಎಂದು ತಿಳಿಸಿದರು. ಹಿರಿಯರಾದ ಎಂ.ಎ.ವಸಂತ್ ಮಾತನಾಡಿ, ವಿದ್ಯುತ್ ಅಡಚಣೆ, ನೀರಿನ ಸಮಸ್ಯೆಗಳಿಂದ ಬಡಾವಣೆ ಜನ ಪರದಾಡುವಂತಾಗಿದೆ. ಮುಂದಿನ ದಿನಗಳಲ್ಲಿ ತೊಂದರೆ ಎದುರಾದರೆ ಪಂಚಾಯಿತಿಯವರು ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಸುನಿಲ್, ವಿದ್ಯುತ್ ಓವರ್ ಲೋಡ್ ಆದಾಗ ಒಂದೇ ದಿನ ಮೂರು ಮೋಟಾರುಗಳು ಸುಟ್ಟು ಹೋಗಿವೆ. ಇದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಆದರೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ ಎಂದರು. ಹಿರಿಯರಾದ ಡಿ.ನರಸಿಂಹ ಮಾತನಾಡಿ, ಮುಖ್ಯ ರಸ್ತೆ ಎರಡು ಬದಿಯಲ್ಲಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಇದರಿಂದ ಹಾಡಿಹೋಕರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಮಾಂಸದಂಗಡಿಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಮಾಂಸ, ಮೀನು ಮಾರಾಟ ಈಗ, ತಾಂತ್ರಿಕ ದೋಷದಿಂದ ಮಾಡಲಾಗುತ್ತಿದೆ. 11 ಅಂಗಡಿಗಳ ಮಾಲೀಕರು ಉಚ್ಚ ನ್ಯಾಯಾಲದಲ್ಲಿ ಸ್ಟೇ ತಂದಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಪಂಚಾಯತ್ ಸ್ವಂತ ಮಳಿಗೆಗೆ ಸ್ಥಳಾಂತರ ಮಾಡಲಾಗುತ್ತದೆ. ಶುಚಿತ್ವ ಕಾಪಾಡಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದರು. ಕಾಂಗ್ರೆಸ್ ಮುಖಂಡ ಇಸಾಕ್ ಖಾನ್ ಮಾತನಾಡಿ, ವಿದ್ಯುತ್ ಇಲಾಖೆಯ ಬಿಲ್ ಸಮಸ್ಯೆ ಹೆಚ್ಚಿದೆ. ಒಂದು ತಿಂಗಳು ರು.19 ಬಿಲ್ ಬಂದರೆ ಮತ್ತೊಂದು ತಿಂಗಳು ರು.2 ಸಾವಿರ ಬಿಲ್ ಬಂದಿದೆ. ಇದಕ್ಕೆ ಕಾರಣ ಏನು? ವಿದ್ಯುತ್ ಇಲಾಖೆಯಿಂದ ಸ್ಪಂದನೆ ದೊರಕುತ್ತಿಲ್ಲ. ಬಿಲ್ ವ್ಯತ್ಯಯ ಉಂಟಾಗುತ್ತಿದೆ. ಬೀದಿ ದೀಪ ಆನ್ ಮಾಡಲು ಜನ ಇಲ್ಲ ಎಂದರು. ಇದಕ್ಕೆ ವಿದ್ಯುತ್ ಇಲಾಖೆಯ ಜೆಇ ಲವಕುಮಾರ್ ಪ್ರತಿಕ್ರಿಯಿಸಿ, 199 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅದಕ್ಕಿಂತ ಹೆಚ್ಚು ಉಪಯೋಗಿಸಿದರೆ ಬಿಲ್ ಹೆಚ್ಚಾಗುತ್ತದೆ. ಬೀದಿ ದೀಪಗಳ ನಿರ್ವಹಣೆಯನ್ನು ಪಂಚಾಯಿತಿ ಮಾಡುತ್ತಿದೆ. ವಿದ್ಯುತ್ ಇಲಾಖೆಯಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಪಾರ್ಕಿಂಗ್ ಸಮಸ್ಯೆ ಹೆಚ್ಚು : ಸಂವಾದದಲ್ಲಿ ಪಟ್ಟಣದಲ್ಲಿ ಪಾಕಿರ್ಂಗ್ ಹಾಗೂ ಟ್ರಾಫಿಕ್ ಸಮಸ್ಯೆ ಕುರಿತ ದೂರುಗಳು ಹೆಚ್ಚಾಗಿ ಕೇಳಿಬಂತು. ಹಿರಿಯರಾದ ವಹೀದ್ ಜಾನ್ ಮಾತನಾಡಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇದೆ. ಪೆÇಲೀಸ್ ಸಿಬ್ಬಂದಿಗಳು ವಾಹನಗಳ ಸಂಚಾರ ನಿಯಂತ್ರಣ ಮಾಡಲು ಕ್ರಮ ವಹಿಸಬೇಕು. ಈಗಿನ ಮಾರುಕಟ್ಟೆ ಹಳೆಯದಾಗಿದೆ. ಮಾರುಕಟ್ಟೆಗೆ ಹೊಸ ಕಟ್ಟಡಗಳು ಬೇಕಾಗಿದೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಕರೀಂ ಮಾತನಾಡಿ ಶಾಂತಿಗಿರಿಯಿಂದ ಗದ್ದೆಗಳ್ಳ ವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನ ಮನೆಯ ಮುಂದೆ ಎರಡು ಬದಿಯಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ಇದರಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ. ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು. ಆಟೋ ಚಾಲಕರಾದ ಪ್ರಶಾಂತ್ ಮಾತನಾಡಿ ರಸ್ತೆ ಬದಿಯಲ್ಲಿನ ತಾತ್ಕಾಲಿಕ ಶೆಡ್ ತೆಗೆದರೆ ಪಾಕಿರ್ಂಗ್ ಸಮಸ್ಯೆ ಇತ್ಯರ್ಥವಾಗುತ್ತದೆ ಎಂದು ಸಲಹೆ ನೀಡಿದರು. ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಶರೀಫ್ ಮಾತನಾಡಿ ಖಾಸಗಿ ಬಸ್ ನಿಲ್ದಾಣವಿದ್ದರೂ ಬಸ್ ಗಳನ್ನು ಹೆದ್ದಾರಿ ಬದಿ ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಶೌಚಾಲಯದ ಸಮಸ್ಯೆ ಕೂಡ ಹೆಚ್ಚಾಗಿದೆ. ಈ ಸಮಸ್ಯೆ ಬಗೆಯರಿಸಬೇಕು ಎಂದು ಒತ್ತಾಯಿಸಿದರು. ಈ ಸಮಸ್ಯೆಗಳಿಗೆ ಉತ್ತರಿಸಿದ ಗ್ರಾಪಂ ಅಧ್ಯಕ್ಷ ಸುನಿಲ್, ಟ್ರಾಫಿಕ್ ಸಮಸ್ಯೆ ಬಗ್ಗೆ ಈಗಾಗಲೇ ಸಾಕಷ್ಟು ದೂರುಗಳು ಬಂದಿದೆ. ಹೊಸ ಮಾರುಕಟ್ಟೆಗೆ ಈಗಾಗಲೇ ಶಂಕುಸ್ಥಾಪನೆ ಮಾಡಲಾಗಿದೆ. ಮಾರುಕಟ್ಟೆ ಕಡೆ ಸಂತೆ ಅಂಗಡಿ ಸ್ಥಳಾಂತರ ಮಾಡಿದ ನಂತರ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ. ಟ್ರಾಫಿಕ್ ಸಮಸ್ಯೆ ಈ ಬಗ್ಗೆ ಪೆÇಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳಬೇಕೆಂದರು. ಶೌಚಾಲಯ ನಿರ್ವಹಣೆಗೆ ಯಾರೂ ಮುಂದೆ ಬರುತ್ತಿಲ್ಲ. ಆದಷ್ಟು ಬೇಗ ನಿರ್ವಹಣೆ ಮಾಡುವವರು ಬಂದರೆ ಶೌಚಾಲಯ ಸೂಕ್ತ ರೀತಿಯಲ್ಲಿ ನಿರ್ವಹಣೆಯಾಗಲಿದೆ ಎಂದರು. ಸುಂಟಿಕೊಪ್ಪ ಠಾಣೆಯ ಎಎಸ್ಐ ರಮೇಶ್ ಮಾತನಾಡಿ ಟ್ರಾಫಿಕ್ ಸಮಸ್ಯೆ ಬಗ್ಗೆ ಸಾರ್ವಜನಿಕರ ಸಮ್ಮುಖದಲ್ಲಿ ಸಭೆ ಕರೆದು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಖಾನ್ ಮಾತನಾಡಿ ಅನಧಿಕೃತ ಲೇಔಟ್ ನಿಂದ ಮೂಲ ಸೌಕರ್ಯದ ಸಮಸ್ಯೆಯಾಗುತ್ತಿದೆ. ಸಮಸ್ಯೆ ಬಹಳಷ್ಟಿದೆ ಆದರೆ ಪರಿಹಾರ ಸಿಗುತ್ತಿಲ್ಲ. ಅಧಿಕಾರಿಗಳು ಸಮಸ್ಯೆ ಅರಿತುಕೊಳ್ಳಬೇಕು. ಸುಂಟಿಕೊಪ್ಪದಲ್ಲಿ ಸಮಸ್ಯೆ ಬಗೆಯರಿಸುವಲ್ಲಿ ತಾಲೂಕು ಹಾಗೂ ಜಿಲ್ಲಾ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿದರು. ಮಾನವೀಯ ಒಕ್ಕೂಟದ ಕೆ.ಎಸ್.ಅನಿಲ್ ಮಾತನಾಡಿ, ಸುಂಟಿಕೊಪ್ಪ ಆಸ್ಪತ್ರೆಯಲ್ಲಿ ಯಾವುದೇ ವೈದ್ಯಾಧಿಕಾರಿಗಳಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಆಂಬುಲೆನ್ಸ್ ಸಮಸ್ಯೆ ಕೂಡ ಕಾಡುತ್ತಿದೆ ಎಂದರು. ಈಗಾಗಲೇ ಪರೀಕ್ಷಾ ಫಲಿತಾಂಶಗಳು ಪ್ರಕಟಗೊಂಡಿದ್ದು, ವಿವಿಧ ದಾಖಲೆ ಪ್ರಮಾಣ ಪತ್ರಗಳನ್ನು ಆದಷ್ಟು ಶೀಘ್ರವಾಗಿ ಕಚೇರಿಯಲ್ಲಿ ನೀಡುವಂತಾಗಬೇಕೆಂದು ಮನವಿ ಮಾಡಿದರು. ಇದಕ್ಕೆ ಉಪ ತಹಶೀಲ್ದಾರ್ ಪ್ರಶಾಂತ್ ಪ್ರತಿಕ್ರಿಯಿಸಿ, ಅರ್ಹ ಫಲಾನುಭವಿಗಳಿಗೆ ಆದಷ್ಟು ಶೀಘ್ರವಾಗಿ ಯಾವುದೇ ಅಡೆತಡೆಗಳಿಲ್ಲದೆ ದಾಖಲೆ ಪತ್ರಗಳನ್ನು ನೀಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್ ಟಿ ಮಾತನಾಡಿ ಪತ್ರಕರ್ತರ ಸಂಘದಿಂದ ಸಮಾಜಮುಖಿ ಕಾರ್ಯಕ್ರಮ ಮಾಡಲಾಗುತ್ತಿದೆ. ಅಲ್ಲದೆ ಪಟ್ಟಣದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಈ ರೀತಿಯ ಸಂವಾದ ಆಯೋಜಿಸಲಾಗುತ್ತಿದೆ. ಸುಂಟಿಕೊಪ್ಪ ಭಾವೈಕ್ಯತೆಯ ಊರು, ಇಲ್ಲಿ ಫುಟ್ಬಾಲ್ ಕ್ರೀಡೆ ಹೆಚ್ಚು ಪ್ರಸಿದ್ಧಿ. ಸೌಹಾ ರ್ದತೆಗೆ ಹೆಸರಾದ ಸುಂಠಿಕೊಪ್ಪ ಪಟ್ಟಣದ ಹಲವಾರು ಸಮಸ್ಯೆಗಳನ್ನು ಬಗೆಯರಿಸಬೇಕಿದೆ ಎಂದರು. ಕೊಡಗು ಪತ್ರಕರ್ತರ ಸಂಘ ಈ ಸಂವಾದದಲ್ಲಿ ಕಂಡು ಬಂದ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರಿ ಮಟ್ಟದಲ್ಲಿ ಪ್ರಯತ್ನ ಮಾಡಲಿದೆ ಎಂದೂ ಅನಿಲ್ ಹೇಳಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಅನೂಪ್ ಕುಮಾರ್ ಮಾತನಾಡಿ ಸುಂಟಿಕೊಪ್ಪದಲ್ಲಿ ಕೆಲವು ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರೊಂದಿಗೆ ದರ್ಪದಿಂದ ಮಾತನಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಬ್ಯಾಂಕ್ ಗಳನ್ನು ರಾಷ್ಟ್ರೀಕೃತ ಮಾಡಿದ ಹಿನ್ನೆಲೆ ಇಂಥ ಸಮಸ್ಯೆಯಾಗಿದೆ ಎಂದರು. ಇದಕ್ಕೆ ಎಎಸ್ಐ ರಮೇಶ್ ಪ್ರತಿಕ್ರಿಯಿಸಿ ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕ ಸ್ನೇಹಿಯಾಗಿ ಕೆÉಲಸ ಮಾಡಬೇಕು ಎಂದರು. ಸುಂಟಿಕೊಪ್ಪದ ಶೂ ಮಾಲೀಕರೊಬ್ಬರು ತನ್ನ ಸುಮಾರು 1.5 ಲಕ್ಷ ರುಪಾಯಿ ಹಣ ಅನ್ ಲೈನ್ ನಲ್ಲಿ ವಂಚನೆಯಾಗಿದೆ. ಒಂದು ತಿಂಗಳಾದರೂ ಯಾವುದೇ ಮಾಹಿತಿ ದೊರಕಿಲ್ಲ ಎಂದು ಗಮನಕ್ಕೆ ತಂದರು. ಇದಕ್ಕೆ ಎಎಸ್ಐ ರಮೇಶ್ ಪ್ರತಿಕ್ರಿಯಿಸಿ, ಆದಷ್ಟು ಬೇಗ ತನಿಖೆ ನಡೆಸಲಾಗುವುದು, ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣ ಹೆಚ್ಚಾಗುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕೆಂದರು. ಜೆಸಿಐ ಪ್ರಮುಖರಾದ ಫೆಲ್ಸಿ ಡೆನ್ನಿಸ್ ಮಾತನಾಡಿ ಶಾಲಾ ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದು, ನಮ್ಮ ಅಂಗಡಿಗೆ ಹಾನಿಯಾಗುತ್ತಿದೆ. ತ್ಯಾಜ್ಯಗಳು ವಿಲೇವಾರಿ ಆಗುತ್ತಿಲ್ಲ. ಚರಂಡಿಗಳು ಶುಚಿತ್ವ ಇಲ್ಲ ಎಂದರು. ಇದಕ್ಕೆ ಉತ್ತರಿಸಿ ಅಧ್ಯಕ್ಷ ಸುನಿಲ್, ಮೈದಾನದಲ್ಲಿ ನೆಟ್ ವ್ಯವಸ್ಥೆ ಮಾಡಲಾಗುವುದು. ಕಸದ ಸಮಸ್ಯೆ ಇದೆ. ಸಂಪನ್ಮೂಲದ ಕೊರತೆಯಿಂದ ಸಮಸ್ಯೆಯಾಗಿದೆ. ಕಸದ ವಾಹನಗಳು ಬರುತ್ತಿದ್ದು, ಸಾರ್ವಜನಿಕರು ಕಸವನ್ನು ವಾಹನಕ್ಕೆ ಹಾಕುವ ಮೂಲಕ ಸಹಕರಿಸಬೇಕೆಂದರು.
ಬಡಾವಣೆಗೆ ಕೊಳಚೆ ನೀರು : ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಅನೂಪ್ ಕುಮಾರ್ ಮಾತನಾಡಿ ಖಾಸಗಿ ಸಂಸ್ಥೆಯೊಂದರ ನಿವೇಶನದಿಂದ ಮಳೆಯ ಕೊಳಚೆ ನೀರು ಮತ್ತೊಂದು ಬಡಾವಣೆಗೆ ಬರುತ್ತಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು. ಪಿಡಿಒ ಲೋಕೇಶ್ ಪ್ರತಿಕ್ರಿಯಿಸಿ, ಕೊಳಚೆ ನೀರು ಬರುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ದೂರು ಬಂದಿದೆ. ಅತ್ಯಂತ ಗಂಭೀರವಾಗಿ ಈ ಸಮಸ್ಯೆಯನ್ನು ಪರಿಗಣಿಸಲಾಗಿದ್ದು, ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ ಎಂದರು. ಮಾಧ್ಯಮ ಸಂವಾದದಲ್ಲಿ ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಖಜಾಂಚಿ ಟಿ.ಕೆ. ಸಂತೋಷ್, ಕ್ಷೇಮಾಭಿವೃದ್ಧಿ ಅಧ್ಯಕ್ಷ ಜಿ.ವಿ. ರವಿಕುಮಾರ್, ನಿರ್ದೇಶಕರಾದ ವಿಶುಕುಮಾರ್, ರಂಜಿತ್ ಕವಲಪಾರ, ಗುರುದರ್ಶನ್, ಲಕ್ಷ್ಮೀಶ್, ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್, ಖಜಾಂಚಿ ನವೀನ್ ಕುಮಾರ್, ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸೆಬಾಸ್ಟಿನ್, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಕಾಂಗ್ರೆಸ್ ಮುಖಂಡ ಯಂಕನ ಶ್ರೀರಾಮ್ ಸೇರಿದಂತೆ ಹಲವರು ಸಂವಾದದಲ್ಲಿ ಪಾಲ್ಗೊಂಡಿದ್ದರು.