






ನಾಪೋಕ್ಲು ಏ.18 NEWS DESK : ಬಲ್ಲಮಾವಟಿ ಪಂಚಾಯತಿಯ ಪೇರೂರು ಗ್ರಾಮದ ಪೇರೂರಿಯನ್ಸ್ ಕ್ಲಬ್ ವತಿಯಿಂದ 7ನೇ ವರ್ಷದ ಉಚಿತ ಬೇಸಿಗೆ ಹಾಕಿ ಶಿಬಿರ ಉದ್ಘಾಟನೆಗೊಂಡಿತು. ಪೇರೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಉಚಿತ ಬೇಸಿಗೆ ಹಾಕಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಬಲ್ಲಮಾವಟಿ ಗ್ರಾಮ ಪಂಚಾಯತ್ ಸದಸ್ಯರಾದ ಮಚ್ಚುರ ಎಂ.ರವೀಂದ್ರ, ಆರೋಗ್ಯಯುತ ಸಮಾಜಕ್ಕಾಗಿ ಕ್ರೀಡೆ ಮುಖ್ಯ, ಕೊಡಗು ಪುಟ್ಟ ಜಿಲ್ಲೆಯಾದರೂ ಅನೇಕ ಕ್ರೀಡಾಪಟುಗಳನ್ನು ರಾಷ್ಟ್ರಕ್ಕೆ ನೀಡಿದೆ ಎಂದರು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಯುವ ಪೀಳಿಗೆ ಮಾರ್ಗದರ್ಶನ ನೀಡಿ ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸುವಂತಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಖ್ಯಾತ ತರಬೇತುದಾರರಾದ ಮಣವಟ್ಟಿರ ಮಧು ಅಯ್ಯಪ್ಪ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತಿನಿಂದ ಮುನ್ನಡೆದರೆ ಉತ್ತಮ ಆಟಗಾರನಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು. ಚೀಯಕಪೂವಂಡ ಮಿಥುನ್ ಚಂಗಪ್ಪ ಮಾತನಾಡಿ, ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳು ಮೊಬೈಲ್ ಮತ್ತು ಟಿವಿಯ ಮಾರು ಹೋಗದೆ ಆರೋಗ್ಯದ ಹಿತ ದೃಷ್ಟಿಯಿಂದ ಕ್ರೀಡೆಯನ್ನು ಆರಿಸಿಕೊಳ್ಳಬೇಕು ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪೇರೂರಿಯನ್ಸ್ ಕ್ಲಬ್ ಹಾಕಿ ಶಿಬಿರದ ಅಧ್ಯಕ್ಷ ನಿವೃತ್ತ ಯೋಧ ತಾಪಂಡ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾಭಿಮಾನಿಗಳಾದ ಅಪ್ಪಚೆಟ್ಟೋಳಂಡ ಶ್ಯಾಮ್ ಕಾಳಯ್ಯ, ಪಾಲೇಯಡ ಸಂತೋಷ್, ಪಾಲೇಯಡ ಅಯ್ಯಪ್ಪ ಪೇರೂರಿಯನ್ಸ ಕ್ಲಬ್ ಪದಾದಿಕಾರಿಗಳು, ಶಿಬಿರಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು. ಉಚಿತ ಬೇಸಿಗೆ ಹಾಕಿ ಶಿಬಿರವು 15 ದಿನಗಳ ಕಾಲ ನಡೆಯಲಿದೆ.
ವರದಿ : ದುಗ್ಗಳ ಸದಾನಂದ.