






ಮಡಿಕೇರಿ ಏ.18 NEWS DESK : ವಕ್ಫ್ ಮಂಡಳಿಗಳಿಗೆ ಸದಸ್ಯರ ನೇಮಕ ಮಾಡದಂತೆ ಮತ್ತು ವಕ್ಫ್ ಆಸ್ತಿಗಳಲ್ಲಿ ಯಾವುದೇ ಬದಲಾವಣೆ ತಾರದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಮುಂದಿನ ಆದೇಶದವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್ ಕ್ರಮ ಸ್ವಾಗತಾರ್ಹವೆಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ.ಉಸ್ಮಾನ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುವುದಾಗಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಯಾರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ದೇಶದ ಸಂವಿಧಾನ ಮತ್ತು ಕಾನೂನಿನ ಮೇಲೆ ನಮಗೆ ಅಪಾರ ಗೌರವವಿದೆ. ನ್ಯಾಯಾಲಯದ ಮೇಲೆ ನಾವು ಹೊಂದಿರುವ ವಿಶ್ವಾಸಕ್ಕೆ ವಕ್ಫ್ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶವೇ ಸಾಕ್ಷಿಯಾಗಿದೆ. ಅರ್ಜಿಗಳ ವಿಚಾರಣೆಯ ನಂತರ ಮುಸಲ್ಮಾನರ ಧಾರ್ಮಿಕ ನಂಬಿಕೆಗೆ ಜಯ ಸಿಗಲಿದೆ ಎನ್ನುವ ಬಲವಾದ ವಿಶ್ವಾಸವಿದೆ. ಆದ್ದರಿಂದ ಈ ನಿಟ್ಟಿನಲ್ಲಿ ನಡೆಯುವ ಎಲ್ಲಾ ಕಾನೂನು ಹೋರಾಟಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ಬಳಿಕ ಮುಂದಿನ ವಿಚಾರಣೆಯವರೆಗೆ ‘ವಕ್ಫ್ ಬೈ ಡೀಡ್’ ಮತ್ತು ‘ಬಳಕೆದಾರರಿಂದ ವಕ್ಫ್’ ಅನ್ನು ಡಿನೋಟಿಫೈ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರದ ಪರ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ಗೆ ನೀಡಿರುವ ಭರವಸೆಯನ್ನು ಕೂಡ ಸ್ವಾಗತಿಸುವುದಾಗಿ ಎಂ.ಎ.ಉಸ್ಮಾನ್ ತಿಳಿಸಿದ್ದಾರೆ. ದೇವರ ಹೆಸರಿನಲ್ಲಿ ದಾನಿಗಳು ನೀಡಿರುವ ಆಸ್ತಿಯನ್ನು ತಲೆತಲಾಂತರಗಳಿಂದ ಮುಸ್ಲಿಂ ಸಮುದಾಯ ಸಂರಕ್ಷಿಸಿಕೊಂಡು ಬಂದಿದೆ. ಈ ಆಸ್ತಿಯ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.