ನಾಪೋಕ್ಲು ಏ.21 NEWS DESK : ಸುಮಾರು ಏಳು ಶತಮಾನ ಇತಿಹಾಸವುಳ್ಳ ಅವಂದೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಾಲಯದ ಜೀರ್ಣೋದ್ಧಾರ ಕಾರ್ಯ ಪ್ರಯುಕ್ತ ದೇವರ ವಿಗ್ರಹವನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಶ್ರೀ ಕೃಷ್ಣ ಮದೇನಾಡು ಗ್ರಾಮ ಪಂಚಾಯತಿಯ ಅವಂದೂರು ಗ್ರಾಮದ ಗ್ರಾಮ ದೇವರಾಗಿ ಆರಾಧಿಸಲ್ಪಟ್ಟ ದೇವರು. ಇದೀಗ ಶ್ರೀ ದೇವರ ಸಾನಿಧ್ಯದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುವ ದೃಷ್ಟಿಯಿಂದ ದೇವತಾನುಗೃಹದಂತೆ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದೊಂದಿಗೆ ಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನದ ಕಟ್ಟಡವನ್ನು ತೆರವುಗೊಳಿಸಿ ಪ್ರಸ್ತುತ ನೂತನವಾಗಿ ಪುನರ್ ಪ್ರತಿಷ್ಠಾಪನೆ ಮಾಡುವ ತೀರ್ಮಾನವನ್ನು ಸಮಿತಿಯು ಕೈಗೊಂಡಿದೆ. ಈ ಉದ್ದೇಶದಂತೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಕಡ್ಯದ ಸೋಮಣ್ಣ, ಉಪಾಧ್ಯಕ್ಷರು ಚೊಕ್ಕಾಡಿ ಅಪ್ಪಯ್ಯ, ಕಾರ್ಯದರ್ಶಿ ಪಟ್ಟಡ ಸುಗುಣ ಕುಮಾರ್, ಖಜಾಂಚಿ ಬೆಳ್ಯನ ಚಂದ್ರಪ್ರಕಾಶ್, ಅರ್ಚಕರಾದ ದಿನೇಶ್ ಭಟ್ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ದೇವಸ್ಥಾನ ಜೀರ್ಣೋದ್ಧಾರದ ಮೂಲ ಸಮಿತಿ, ಗ್ರಾಮದ ತಕ್ಕ ಮುಖ್ಯಸ್ಥರು, ಗ್ರಾಮದ ಕಾರ್ಯದರ್ಶಿ, ಅವಂದೂರಿನ ಗ್ರಾಮಸ್ಥರು ಹಾಗೂ ದಾನಿಗಳ ತನು-ಮನ-ಧನದ ಸಹಕಾರದೊಂದಿಗೆ ಪುನರ್ ನಿರ್ಮಾಣಕ್ಕೆ ಪೂರಕವಾದ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಪ್ರಾರಂಭಗೊಂಡಿದೆ. ದೇವಸ್ಥಾನದ ಗರ್ಭಗುಡಿಯಿಂದ ಶ್ರೀ ದೇವರ ಮೂರ್ತಿಯನ್ನು ಸಕಲ ವಿಧಿ ವಿಧಾನದೊಂದಿಗೆ ಬಾಲಾಲಯಕ್ಕೆ ಸ್ಥಳಾಂತರ ಮಾಡುವ ವಿಶೇಷ ಪೂಜಾ ಕೈಂಕರ್ಯಗಳು ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದೊಂದಿಗೆ ನೆರವೇರಿತು.
ವರದಿ : ದುಗ್ಗಳ ಸದಾನಂದ.












