
ಕುಶಾಲನಗರ ಏ.24 NEWS DESK : ಹನ್ನೆರಡನೇ ಶತಮಾನದ ವಚನಗಾರ್ತಿ ಅಕ್ಕಾಮಹಾದೇವಿ ಈ ನಾಡು ಕಂಡ ಶ್ರೇಷ್ಟ ಶಿವಶರಣೆಯಾಗಿದ್ದು ಸೂರ್ಯ ಚಂದ್ರರು ಇರುವ ತನಕ ಅಕ್ಕನ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಲಿವೆ ಎಂದು ಕೆ.ಆರ್.ನಗರ ತಾಲ್ಲೂಕು ಲಾಳನಹಳ್ಳಿಯ ಗುರುಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿ ತಾಯಿ ಹೇಳಿದರು. ಕುಶಾಲನಗರದ ಅಕ್ಕನ ಬಳಗದ ವತಿಯಿಂದ ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿವ ಶರಣೆ ಅಕ್ಕಾಮಹಾದೇವಿ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಪ್ರವಚನ ನೀಡಿದ ಅವರು, ಮಹಾದೇವಿಯ ಸೌಂದರ್ಯಕ್ಕೆ ಮಾರು ಹೋದ ಕೌಶಿಕ ಮಹಾರಾಜ ಆಕೆಯನ್ನು ವರಿಸಲು ಎಷ್ಟೆಲ್ಲಾ ವಿಫಲ ಸಾಹಸಗಳನ್ನು ಮಾಡಿದಾಗ್ಯೂ ಚನ್ನಮಲ್ಲಿಕಾರ್ಜುನ ದೇವನೇ ಗಂಡ ಎಂದು ಇಷ್ಟದೈವವನ್ನು ಜೀವನ ಪೂರ್ತಿ ಆರಾಧಿಸಿದ ಮಹಾಚೇತನ. ಕೌಶಿಕ ಮಹಾರಾಜನ ದೌರ್ಜನ್ಯಕ್ಕೆ ಆಕ್ರೋಷ ವ್ಯಕ್ತಪಡಿಸಿ ತನ್ನೆಲ್ಲಾ ವಸ್ತ್ರ – ವೈಢೂರ್ಯಗಳನ್ನು ಕಿತ್ತೆಸೆದು ದಿಗಂಬರಳಾಗಿ ಕಲ್ಯಾಣಕ್ಕೆ ಹೋದಾಗ ಅಲ್ಲಿನ ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭು ಕೂಡ ಮಹಾದೇವಿಯನ್ನು ಪರೀಕ್ಷಿಸಿದ ಬಳಿಕ ಅಕ್ಕಾ ಎಂಬ ಬಿರುದು ನೀಡಿದ್ದನ್ನು ಶಿವಶರಣೆ ಅಕ್ಕಾ ವಚನಗಳ ಮೂಲಕ ವಿಶ್ಲೇಷಿಸಿದರು. ಅವತ್ತಿನ ಶರಣ ಶರಣೆಯರ ಜೀವನ ಪದ್ಧತಿಯನ್ನು ಇಂದು ಎಲ್ಲರೂ ಕಡೆಗಣಿಸಿರುವ ಬಗ್ಗೆ ವಿಷಾದಿಸಿದ ಅಕ್ಕಾ, ನಮ್ಮ ನಮ್ಮ ಮನೆಗಳ ಪರಿಕರಗಳನ್ನು ಆಗಾಗ್ಗೆ ಬದಲಿಸುವ ನಾವು ನಮ್ಮ ಮನಸ್ಥಿತಿಗಳನ್ನು ಏಕೆ ಬದಲಿಸುತ್ತಿಲ್ಲಾ ಎಂದು ಪ್ರಶ್ನಿಸಿದ ಶರಣೆ ಅಕ್ಕಾ, ಸಮಾಜದ ಸಂಪತ್ತುಗಳಾಗಿ ನಮ್ಮ ಮಕ್ಕಳನ್ನು ನಾವು ಬೆಳೆಸಬೇಕೆಂದರೆ ಮಕ್ಕಳ ಹಣೆಯಲ್ಲಿ ವಿಭೂತಿ ಹಾಗೂ ಅಂಗದ ಮೇಲೆ ಲಿಂಗವನ್ನು ಪ್ರತಿಷ್ಠಾಪಿಸಬೇಕು. ಈ ಮೂಲಕ ಶಿವಶರಣರ ಪಂಥದ ನಮ್ಮ ವೀರಶೈವ ಪರಂಪರೆ ಹಾಗೂ ಸಂಸ್ಕಾರಗಳನ್ನು ಸಂರಕ್ಷಿಸಲು ಅವರು ಕರೆಕೊಟ್ಟರು. ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಇಂದಿನ ಮಹಿಳೆಯರು ಶಿವಶರಣೆ ಅಕ್ಕಾಮಹಾದೇವಿ ಅವರ ಆದರ್ಶಗಳು ಹಾಗೂ ಚಿಂತನೆಗಳನ್ನು ಹೊಂದುವ ಮೂಲಕ ನಮ್ಮ ಶರಣ ಪರಂಪರೆಯ ಸಂಸ್ಕಾರಗಳನ್ನು ಜೋಪಾನ ಮಾಡಬೇಕೆಂದು ಕರೆಕೊಟ್ಟರು. ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಮಾತನಾಡಿದರು. ಚಿತ್ರದುರ್ಗದ ಬಸವಮಹಾಮನೆಯ ಶರಣೆ ದ್ರಾಕ್ಷಾಯಿಣಿ ದೇವಿ ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸಾಂಬಶಿವಮೂರ್ತಿ, ವೀರಶೈವ ಸರ್ಕಾರಿ ನೌಕರರ ಕ್ಷೇಮಾಭಿವೃದ್ದಿ ಅಧ್ಯಕ್ಷ ಎಸ್.ನಂದೀಶ್, ವೀರಶೈವ ಮಹಾಸಭಾ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ದೀಪಿಕಾ ಕರುಣ, ಅಕ್ಕನಬಳಗದ ಅಧ್ಯಕ್ಷೆ ಕಮಲಾ ಉದಯಕುಮಾರ್, ಮಾಜಿ ಅಧ್ಯಕ್ಷೆ ವಿಜಯಪಾಲಾಕ್ಷ, ಅಕ್ಕನ ಬಳಗದ ಉಪಾಧ್ಯಕ್ಷೆ ಪ್ರೇಮ ಮಹದೇವಪ್ಪ, ಖಜಾಂಚಿ ನೇತ್ರಾವತಿ, ನಿರ್ದೇಶಕರಾದ ಮಣಿಯಮ್ಮ,ಮೋಹಿನಿ, ಲೇಖನಾ,ಮಮತಾ, ನಾಗರತ್ನ, ಲತಾ, ಗೀತಾ, ಸರೋಜಾ ಮೊದಲಾದವರಿದ್ದರು ಇದ್ದರು. ಶಿಕ್ಷಕ ಹುಲುಸೆ ಬಸವರಾಜು ಪ್ರಾಸ್ತಾವಿಕ ನುಡಿಗಳಾಡಿದರು. ಶಿಕ್ಷಕಿ ನಿರ್ಮಲ ಶಿವಲಿಂಗ ನಿರೂಪಿಸಿದರು.
ಅಕ್ಕನಬಳಗದ ಕಾರ್ಯದರ್ಶಿ ಮನುದೇವಿ ಜಗದೀಶ್ ಸ್ವಾಗತಿಸಿದರು. ಮೋಹಿನಿ ವಂದಿಸಿದರು.









