
ಮಡಿಕೇರಿ ಮೇ 2 NEWS DESK : ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಕೊಡಗು ಜಿಲ್ಲಾ ಕ್ರೈಸ್ತರ ಸೇವಾ ಸಂಘ ತೀವ್ರವಾಗಿ ಖಂಡಿಸಿದೆ. ನಗರದಲ್ಲಿ ನಡೆದ ಸಂಘದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ 26 ಪ್ರವಾಸಿಗರನ್ನು ಅಮಾನುಷವಾಗಿ ಹತ್ಯೆ ಮಾಡಿದ ಭಯೋತ್ಪಾದಕರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಲಾಯಿತು ಮತ್ತು ಮೃತರ ಆತ್ಮಕ್ಕೆ ಶಾಂತಿಕೋರಿ ಸಂತಾಪ ಸೂಚಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕ್ರೈಸ್ತರ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ ಅವರು, ಭಯೋತ್ಪಾದನೆಯನ್ನು ಭಾರತದಿಂದ ನಿರ್ನಾಮ ಮಾಡಲು ದೇಶದ ಆಡಳಿತ ವ್ಯವಸ್ಥೆಗೆ ಸಂಪೂರ್ಣ ಬೆಂಬಲವನ್ನು ನೀಡಬೇಕೆಂದು ಮನವಿ ಮಾಡಿದರು. ಅಮಾಯಕ ಪ್ರವಾಸಿಗರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ ಅವರು, ಇದು ಕ್ಷಮೆ ಇಲ್ಲದ ಕ್ರೂರ ಕೃತ್ಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಕ್ಯಾಥೋಲಿಕ್ ಧರ್ಮ ಸಭೆಯ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆಯ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಾನ್ಸಿ ಫರ್ನಾಂಡಿಸ್, ಸಹ ಕಾರ್ಯದರ್ಶಿ ಸುನಿಲ್ ಲೋಬೋ, ಪ್ರಮುಖರಾದ ಸಿ.ಟಿ.ಜೋಸೆಫ್, ಬಿನು ಜಾರ್ಜ್, ರಿಚರ್ಡ್ ಉಲ್ಲಾಸ್, ಕೆ.ಇ.ಮ್ಯಾಥ್ಯೂ, ಎನ್.ಟಿ.ಜೋಸೆಫ್, ಸೆಲಿನಾ ಪೆದ್ರು, ಕೆ.ಜಿ.ಪೀಟರ್, ಪಿ.ಟಿ.ಅಂತೋಣಿ, ಡೆನ್ನಿ ಬರೋಸ್ ಮತ್ತಿತರರು ಉಪಸ್ಥಿತರಿದ್ದರು.









