





ಮಡಿಕೇರಿ ಮೇ 6 NEWS DESK : ಹಿಂಬದಿಯಿಂದ ಗುಂಡು ಹೊಡೆದು ಕಾಫಿ ಬೆಳೆಗಾರನನ್ನು ಕೊಲೆ ಮಾಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟಳ್ಳಿ ಸಮೀಪದ ಅಭ್ಯತ್ ಮಂಗಲ ಗ್ರಾಮದಲ್ಲಿ ನಡೆದಿದೆ. ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣದ ನಿವಾಸಿ ಕೊಳಂಬೆ ವಿನು(50) ಎಂಬುವವರೇ ಹತ್ಯೆಗೀಡಾದ ವ್ಯಕ್ತಿ. ಕೊಳಂಬೆ ವಿನು ಅವರು ಇಂದು ಅಭ್ಯತ್ ಮಂಗಲ ಗ್ರಾಮದ ತೋಟದಲ್ಲಿದ್ದ ಪೈಪುಗಳನ್ನು ಇಬ್ಬರು ಕಾರ್ಮಿಕರ ಸಹಕಾರದಿಂದ ಗೋದಾಮಿಗೆ ಸಾಗಿಸಿ ದಾಸ್ತಾನು ಮಾಡುವ ಕೆಲಸದಲ್ಲಿ ನಿರತರಾಗಿದ್ದರು. ಈ ಸಂದರ್ಭ ಅಪರಿಚಿತರು ಹಿಂಬದಿಯಿಂದ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ. ಗುಂಡಿನ ಸದ್ದು ಕೇಳಿ ಕಾರ್ಮಿಕರು ಸ್ಥಳ್ಕಾಗಮಿಸಿದ ಸಂದರ್ಭ ಕೊಳಂಬೆ ವಿನು ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕೃತ್ಯಕ್ಕೆ ಆಸ್ತಿ ವೈಷಮ್ಯ ಕಾರಣ ಎಂದು ಹೇಳಲಾಗುತ್ತಿದೆಯಾದರೂ ನಿಖರ ಕಾರಣ ತಿಳಿದುಬಂದಿಲ್ಲ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.