
ಕುಶಾಲನಗರ ಮೇ 8 NEWS DESK : ಕುಶಾಲನಗರ ತಾಲ್ಲೂಕಿನ ಶಿರಂಗಾಲ ಗ್ರಾಮದಲ್ಲಿ ಬಸವ ಸೇವಾ ಸಮಿತಿಯ ವತಿಯಿಂದ ಗ್ರಾಮಾಂತರ ಬಸವ ಜಯಂತಿ ಅಂಗವಾಗಿ ಆಕರ್ಷಕ ಮೆರವಣಿಗೆ ನಡೆಸಲಾಯಿತು. ಗ್ರಾಮದಲ್ಲಿ ಸಂಜೆ ವೇಳೆಗೆ ಅಲಂಕೃತ ಬೆಳ್ಳಿ ರಥದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರವನ್ನಿಟ್ಟು ಮೆರವಣಿಗೆ ಮೂಲಕ ಶೋಭಾಯಾತ್ರೆ ನಡೆಸಲಾಯಿತು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, 12 ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರು ವಚನಗಳ ಮೂಲಕ ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ, ಕಂದಾಚಾರ, ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಮೂಡಿಸಿದರು.ಪ್ರತಿಯೊಬ್ಬರೂ ಬಸವಣ್ಣನವರ ತತ್ವ,ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದರು. ಶಿರಂಗಾಲ ಗ್ರಾಮ ದೇವಾಲಯ ಸಮಿತಿಯ ಕಾರ್ಯದರ್ಶಿ ಎಂಎಸ್.ಗಣೇಶ್ , ಶೋಭಾಯಾತ್ರೆಗೆ ಚಾಲನೆ ನೀಡಿದರು.
ಗ್ರಾಮ ದೇವಾಲಯ ಸಮಿತಿಯ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್, ಗ್ರಾಮ ಬಸವ ಸಮಿತಿಯ ಅಧ್ಯಕ್ಷ ಎಸ್.ಜೆ.ಉಮೇಶ್ ,
ಕಾರ್ಯದರ್ಶಿ ಎನ್.ಎಸ್.ಜಯಣ್ಣ, ಪ್ರಮುಖರಾದ ಎಸ್.ಎಚ್. ರಾಜಪ್ಪ, ಎಂ.ಎಸ್.ಶಿವಾನಂದ, ಎಸ್.ಪಿ.ಪರಮೇಶ್, ಎಸ್.ಆರ್.ಶಿವಲಿಂಗ, ಸಿದ್ದಲಿಂಗಪ್ಪ ಮತ್ತಿತರರು ಇದ್ದರು. ಮೆರವಣಿಗೆಯಲ್ಲಿ ಅಲಂಕೃತಗೊಳಿಸಲಾಗಿದ್ದ ಹೋರಿಯ ಮೆರವಣಿಗೆ ಗಮನ ಸೆಳೆಯಿತು.









