




ಮಡಿಕೇರಿ ಮೇ 9 NEWS DESK : ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯಗಳ ಜಾತಿ ಜನಗಣತಿಯ ಸಮೀಕ್ಷೆ ಆರಂಭಗೊಂಡಿದ್ದು, ಪರಿಶಿಷ್ಟ ಜಾತಿ ಸಮುದಾಯಗಳ ಜನರು ತಮ್ಮ ತಮ್ಮ ಮೂಲ, ಉಪಜಾತಿ ಹೆಸರು ಹಾಗೂ ಇತರ ಮಾಹಿತಿಯನ್ನು ಸಮರ್ಪಕವಾಗಿ ನೀಡುವಂತೆ ದೌರ್ಜನ್ಯ ಪ್ರತಿಬಂಧದ ಕೊಡಗು ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ನಾಮ ನಿರ್ದೇಶಿತ ಸದಸ್ಯರು ಹಾಗೂ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಜೆ.ಎಲ್.ಜನಾರ್ಧನ್ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯಗಳ ಜಾತಿ ಜನಗಣತಿಯ ಸಮೀಕ್ಷೆ ಮೇ 5 ರಿಂದ ಆರಂಭವಾಗಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಮಾದಿಗ, ಕೊರಮ, ಕೊರಚ, ಭೋವಿ, ಲಂಬಾಣಿ, ಅರುಂಧತಿಯಾರ್ ಮುಂತಾದ ಪರಿಶಿಷ್ಟ ಜಾತಿ-ಸಮುದಾಯಗಳ ಜನರು ತಮ್ಮ ತಮ್ಮ ಮೂಲ ಉಪಜಾತಿಗಳ ಹೆಸರನ್ನು ಯಾವುದೇ ಅಳುಕು ಅಥವಾ ಹಿಂಜರಿಕೆ ಇಲ್ಲದೆ ಸಮೀಕ್ಷೆದಾರರಿಗೆ ನೀಡುವಂತೆ ಕೋರಿದ್ದಾರೆ. ಮುಖ್ಯವಾಗಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಜಾತಿ ಪ್ರಮಾಣ ಪತ್ರ ಪಡೆದಿರುವವರು ಕೂಡ ಕಡ್ಡಾಯವಾಗಿ ತಮ್ಮ ತಮ್ಮ ಮೂಲ ಉಪಜಾತಿಗಳ ಹೆಸರನ್ನು ನಮೂದಿಸಲೇಬೇಕು. ಏಕೆಂದರೆ ಪರಿಶಿಷ್ಟ ಜಾತಿಯಲ್ಲಿರುವ ಎಲ್ಲಾ ಉಪಜಾತಿಗಳಿಗೂ ಅವರವರ ಜಾತಿ ಜನಸಂಖ್ಯೆಗನುಗುಣವಾಗಿ ಮೀಸಲಾತಿಯಲ್ಲಿ ನ್ಯಾಯಯುತವಾದ ಪಾಲು ಸಿಗಲೇಬೇಕು. ಯಾರಿಗೂ ಅನ್ಯಾಯವಾಗಬಾರದೆಂದರೆ ಈ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಜನರು ಪಾಲ್ಗೊಳ್ಳಲೇಬೇಕು. ಎಸ್ಸಿ ಸಮುದಾಯಗಳ ಕಾಲೇಜು ವಿದ್ಯಾರ್ಥಿಗಳು, ವಿದ್ಯಾವಂತ ಯುವಜನರು, ನೌಕರರು, ನಿವೃತ್ತ ನೌಕರರು ಹಾಗೂ ದಲಿತ ಚಳವಳಿಯ ಕಾರ್ಯಕರ್ತರು ತಮ್ಮ ತಮ್ಮ ಊರು, ಕೇರಿಗಳು, ವಾರ್ಡ ಮತ್ತು ಬ್ಲಾಕ್ ಗಳಲ್ಲಿರುವ ಸ್ನೇಹಿತರಿಗೆ, ಬಂಧು- ಬಳಗ, ನೆಂಟರಿಷ್ಟರುಗಳಿಗೆಲ್ಲಾ ಸಮೀಕ್ಷೆಯ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕು. ಆ ಮೂಲಕ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದು ತಿಳಿಸಿದ್ದಾರೆ. ಮೇ 17 ರವರೆಗೆ ನಡೆಯುವ ಮೊದಲ ಹಂತದಲ್ಲಿ ಸಮೀಕ್ಷೆದಾರರಿಂದ ಮನೆ-ಮನೆ ಭೇಟಿ ಮೂಲಕ ಸಮೀಕ್ಷೆ ನಡೆಯುತ್ತದೆ. ಎರಡನೇ ಹಂತ ಮೇ 19 ರಿಂದ ಮೇ 21 ರವರೆಗೆ ಬೂತ್ ಮಟ್ಟದ ವಿಶೇಷ ಶಿಬಿರಗಳಲ್ಲಿ ನಡೆಯಲಿದೆ. ಮೇ 19ರಿಂದ 23 ರವರೆಗೆ 3ನೇ ಹಂತದ ಸಮೀಕ್ಷೆ ನಡೆಯಲಿದ್ದು, ಮೊಬೈಲ್ ನಿಂದ ಆನ್ ಲೈನ್ ಮೂಲಕ ಮಾಹಿತಿಯನ್ನು ಸ್ವಯಂಘೋಷಣೆ ಮಾಡಿಕೊಳ್ಳಬಹುದಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯಗಳ ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ. “ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025” ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಆರಂಭಿಸಲಾಗಿದ್ದು, ಸಮಾಜ ಕಲ್ಯಾಣ ಇಲಾಖೆ – ಕಂಟ್ರೋಲ್ ರೂಂ – 9482300400 ಹಾಗೂ ಜಸ್ಟಿಸ್ ನಾಗಮೋಹನ ದಾಸ್ ಆಯೋಗ (ಒಳ ಮೀಸಲಾತಿ ಕುರಿತು) – 9481359000 ಕ್ಕೆ ಸಂಪರ್ಕಿಸಬಹುದಾಗಿದೆ. ಈ ಸಹಾಯವಾಣಿಗಳು ಸಾರ್ವಜನಿಕರ ಅನುಕೂಲಕ್ಕಾಗಿ ದಿನದ 24 ಗಂಟೆಯೂ ಲಭ್ಯವಿರಲಿದೆ ಎಂದು ಜೆ.ಎಲ್.ಜನಾರ್ಧನ್ ಮಾಹಿತಿ ನೀಡಿದ್ದಾರೆ.