





ಮಡಿಕೇರಿ NEWS DESK ಮೇ 9 : ಮಡಿಕೇರಿ ನಗರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ನಗರ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ ಅವರು ಅಭಿನಂದನೆ ಸಲ್ಲಿಸಿರುವುದು ಸ್ವಾಗತಾರ್ಹ. ಆದರೆ ಅಭಿನಂದನೆಯ ಜೊತೆಯಲ್ಲಿ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಬಿಟ್ಟಿ ಸಲಹೆಗಳನ್ನು ನೀಡಿರುವುದು ಸರಿಯಲ್ಲವೆಂದು ನಗರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪಾಂಡಿರ ಪೂಣಚ್ಚ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರವನ್ನು ಅಭಿವೃದ್ಧಿ ಪಡಿಸಲು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸಮರ್ಥರಾಗಿದ್ದಾರೆ, ಈಗಾಗಲೇ ಅಭಿವೃದ್ಧಿ ಕಾರ್ಯಗಳೆಡೆಗೆ ಗಮನ ಹರಿಸಿದ್ದಾರೆ. ನಗರಸಭೆಯಲ್ಲಿ ಹಲವು ಬಾರಿ ಆಡಳಿತ ನಡೆಸಿ ಅನುಭವ ಹೊಂದಿರುವ ಬಿಜೆಪಿ ಜನಪರ ಕಾಳಜಿಯಲ್ಲಿ ಸೈ ಎನಿಸಿಕೊಂಡಿದೆ. 16 ವಾರ್ಡ್ಗಳಲ್ಲಿ ಜಯ ಸಾಧಿಸುವ ಮೂಲಕ ಜನ ಮೆಚ್ಚುಗೆಯನ್ನು ಸಾಬೀತು ಪಡಿಸಿದೆ. ಆದರೆ ಕಾಂಗ್ರೆಸ್ ನ ಪ್ರಕಾಶ್ ಆಚಾರ್ಯ ಅವರು ನಗರದ ಬಗ್ಗೆ ಅತಿ ಕಾಳಜಿ ಇರುವಂತೆ ತೋರ್ಪಡಿಸಿಕೊಳ್ಳುತ್ತಿದ್ದು, ಇವರಿಂದ ಬಿಜೆಪಿ ಸದಸ್ಯರು ಅಭಿವೃದ್ಧಿಯ ಪಾಠ ಕಲಿಯುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ನಗರಸಭೆಗೆ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವಂತೆ ಅವರದ್ದೇ ಪಕ್ಷದ ಶಾಸಕರಿಗೆ ಸಲಹೆಯನ್ನು ನೀಡಲಿ. ಶಾಸಕರ ಹೆಸರು ಹೇಳಿಕೊಂಡು ನಗರಸಭೆಯ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಲಿ. ತಾವು ನಗರಸಭಾ ಸದಸ್ಯರಾಗಿದ್ದಾಗ ನಗರದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಪಾಂಡಿರ ಪೂಣಚ್ಚ ಒತ್ತಾಯಿಸಿದ್ದಾರೆ.