




ಕುಶಾಲನಗರ, ಮೇ 9 NEWS DESK : ಕುಶಾಲನಗರ ತಾಲ್ಲೂಕು ವೀರಶೈವ – ಲಿಂಗಾಯತ ಮಹಾಸಭಾದ ವತಿಯಿಂದ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಮೇ 10 ರಂದು ಕುಶಾಲನಗರ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವೀರಶೈವ ಸಮಾಜ ಬಾಂಧವರಿಗೆ ಬೆಳಿಗ್ಗೆ 10.30 ರಿಂದ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ.ಮಧುಸೂದನ್ ತಿಳಿಸಿದ್ದಾರೆ. ಸಾಮಾನ್ಯ ಪುರುಷ ಆಟಗಾರರಿಗೆ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ, ಮಹಿಳೆಯರಿಗೆ ಥ್ರೋಬಾಲ್ ಟೂರ್ನಿ ಇದೆ. ಪುರುಷರು ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ, ಭಾರದ ಗುಂಡು ಎಸೆತದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಬಾಲಕರು ಮತ್ತು ಬಾಲಕಿಯರಿಗೆ ಹಾಗೂ ಪುರುಷರು ಮತ್ತು ಮಹಿಳೆಯರಿಗೆ ವಿವಿಧ ವೈಯಕ್ತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕ್ರೀಡಾಕೂಟವು ಕ್ರೀಡಾಜ್ಯೋತಿಯೊಂದಿಗೆ ಆರಂಭವಾಗಲಿದೆ. ಕ್ರೀಡಾಕೂಟಕ್ಕೆ ವೀರಶೈವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. ಸ್ಪರ್ಧೆ :: ಅಂಗನವಾಡಿ, ಎಲ್.ಕೆ.ಜಿ., ಯು.ಕೆ.ಜಿ., ಮಕ್ಕಳಿಗೆ ಕಾಳು ಹೆರಕುವುದು, ಕಪ್ಪೆ ಕುಪ್ಪಳಿಸುವಿಕೆ, ಪ್ರೌಢಶಾಲಾ ವಿದ್ಯಾರ್ಥಿಗಳ ಮಟ್ಟದ ತನಕ ನಿಧಾನ ಸೈಕಲ್ ಚಾಲನೆ, ವಿಕಲಚೇತನ ದಿವ್ಯಾಂಗ ಮಕ್ಕಳಿಗೆ ಟೆನಿಸ್ ಬಾಲ್ ಎಸೆತದ ಸ್ಪರ್ಧೆ, ಸಾಮಾನ್ಯ ವಿಭಾಗದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಮಹಾಸಭಾದ ಕಾರ್ಯದರ್ಶಿ ಎನ್.ಧರ್ಮೇಂದ್ರ ತಿಳಿಸಿದ್ದಾರೆ. 1 ರಿಂದ 3, 4 ರಿಂದ 5 , 6 ರಿಂದ 8 ಹಾಗೂ 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ವಯೋಮಾನಕ್ಕೆ ಅನುಗುಣವಾಗಿ ಓಟದ ಸ್ಪರ್ಧೆ, ಊ ಕಾಲೇಜು ವಿದ್ಯಾರ್ಥಿಗಳ ಪೈಕಿ ಬಾಲಕರಿಗೆ 100 ಮೀಟರ್ ಓಟ, ಗೋಣಿಚೀಲದ ಮೂರು ಕಾಲು ಓಟ ಹಾಗೂ ಬಾಲಕಿಯರಿಗೆ ಚಮಚದ ಮೇಲೆ ನಿಂಬೆಹಣ್ಣನ್ನಿಟ್ಟು ಓಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವೀರಶೈವ ಸಮಾಜ ಬಾಂಧವರು ಈ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.