





ಮಡಿಕೇರಿ NEWS DESK ಮೇ 10 : ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಸನ್ನಿಧಿಯಲ್ಲಿ ಮೇ 11ರಿಂದ ಅತಿರುದ್ರ ಜಪಯಜ್ಞ ಆರಂಭಗೊಳ್ಳಲಿದೆ ಎಂದು ಜಪಯಜ್ಞ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್ ಹೊಳ್ಳ ತಿಳಿಸಿದ್ದಾರೆ. ಮೇ 11 ರಂದು ಬೆಳಿಗ್ಗೆ 6.30 ಗಂಟೆಗೆ ಜಪಯಜ್ಞ ಆರಂಭಗೊಳ್ಳಲಿದ್ದು, ಅಂದು ಅರುಣೋದಯದ ಸಮಯಕ್ಕೆ ಸಹಸ್ರ ಮೋದಕಗಳಿಂದ ಶ್ರೀ ಮಹಾಗಣಪತಿ ಹೋಮ ನಡೆಯಲಿದೆ. ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ.ಪ್ರಶಾಂತ್ ಆಚಾರ್ಯರು ಇದರ ನೇತೃತ್ವವನ್ನು ವಹಿಸಲಿದ್ದಾರೆ. ಮೇ 11ರಿಂದ 21ರವರೆಗೆ ನಡೆಯುವ ಜಪಯಜ್ಞಕ್ಕೆ ರಾಜ್ಯಾದ್ಯಾಂತದಿಂದ 50ಕ್ಕೂ ಅಧಿಕ ಋತ್ವಿಜರು ಆಗಮಿಸಲಿದ್ದಾರೆ. ಅವಧೂತರಾದ ಶ್ರೀ ಶ್ರೀ ಶ್ರೀ ಕಾಂತಾನಂದ ಸರಸ್ವತಿ ಮಹಾರಾಜರು ಸಂಕಲ್ಪಿಸಿರುವ ಕೋಟ್ಯಧಿಕ ಶ್ರೀ ರುದ್ರ ಜಪ ಕೈಂಕರ್ಯವು ಕಳೆದ ಐದು ವರ್ಷಗಳಿಂದ ರಾಜ್ಯದ ಎಲ್ಲೆಡೆ ನಡೆಯುತ್ತಿದ್ದು, 50ಲಕ್ಷ ರುದ್ರ ಜಪ ಪೂರ್ಣವಾಗಿದೆ. 2030ರ ಜನವರಿ 18ಕ್ಕೆ ಶಿವಮೊಗ್ಗದಲ್ಲಿ ಜಪಯಜ್ಞ ಸಾಂಗತವಾಗಲಿದೆ. ಮೇ 11ರಿಂದ 19ರವರೆಗೆ ತಲಕಾವೇರಿ ಸನ್ನಿಧಿಯಲ್ಲಿ 9ದಿನಗಳು ಪ್ರತಿದಿನ ಮೂರು ಆವರ್ತ ಶ್ರೀ ರುದ್ರ ಜಪ ಜರುಗಲಿದೆ. ಮೇ 20ರಂದು ಮಡಿಕೇರಿಯ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಶ್ರೀ ರುದ್ರ ಹೋಮ ಹಾಗೂ ಮೂರು ಆವರ್ತ ಶ್ರೀ ರುದ್ರ ಜಪ ನಡೆಯಲಿದೆ. ಮೇ 21ರಂದು ಕಾವೇರಿ ತೀರದಲ್ಲಿರುವ ಕಣಿವೆಯ ಶ್ರೀರಾಮಲಿಂಗೇಶ್ವರ ಸನ್ನಿಧಿಯಲ್ಲಿ ರಂದು ಶ್ರೀಶ್ರೀ ಶ್ರೀಕಾಂತಾನಂದ ಸರಸ್ವತಿ ಮಹಾರಾಜರ ನೇತೃತ್ವದಲ್ಲಿ ಶ್ರೀ ಚಂಡಿಕಾ ಹೋಮ, ಎರಡು ಆವರ್ತ ಶ್ರೀರುದ್ರ ಜಪ ನಡೆಯಲಿದೆ ಎಂದು ರಮೇಶ್ ಹೊಳ್ಳ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ನಡೆಯದ ಈ ಜಪಯಜ್ಞಕ್ಕೆ ಆಸ್ತಿಕ ಬಂಧುಗಳು ಎಲ್ಲಾ ರೀತಿಯ ಸಹಾಯವನ್ನು ನೀಡಿ ಯಶಸ್ವಿಗೊಳಿಸಬೇಕು. ಜಪಯಜ್ಞದಲ್ಲಿ ಪಾಲ್ಗೊಂಡು ಸಹಕಾರ ನೀಡಲು ಇಚ್ಛಿಸುವವರು ಮೊಬೈಲ್ 99458 53543 ಹಾಗೂ 94486 47183 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.