
ಕುಶಾಲನಗರ ಮೇ 12 NEWS DESK : ಕೇಂದ್ರ ಸರ್ಕಾರದ ಕರಕುಶಲ ಮತ್ತು ಜವಳಿ ಮಂತ್ರಾಲಯ ಇಲಾಖೆಯ ಮೈಸೂರಿನ ಕರಕುಶಲ ವಿಸ್ತರಣಾ ಸೇವಾ ಕೇಂದ್ರದ ವತಿಯಿಂದ ಕುಶಾಲನಗರ ಪಟ್ಟಣದ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ಕರಕುಶಲ ವಸ್ತುಗಳ ತಯಾರಿಕೆ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮ ಮುಕ್ತಾಯಗೊಂಡಿತು. ಶಿಬಿರದಲ್ಲಿ ಸಮಾರೋಪ ಭಾಷಣ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿಯ ಸದಸ್ಯ ಎಂ.ಎನ್.ವೆಂಕಟನಾಯಕ್, ಇಂತಹ ಕಲಾ ಶಿಬಿರಗಳು ಜೀವನದಲ್ಲಿ ಕಲಾ ಉತ್ಸವದ ಸೆಲೆಯಾಗಿ ರೂಪುಗೊಳ್ಳಲು ಸಹಕಾರಿಯಾಗಿವೆ ಎಂದರು. ಕಲೆ, ಸಂಸ್ಕೃತಿ ಹಾಗೂ ಕರಕುಶಲ ಕಲೆಯಲ್ಲಿ ಶ್ರೀಮಂತಿಕೆಯನ್ನು ಹೊಂದಿರುವ ಭಾರತದಲ್ಲಿ ಕರಕುಶಲ ಕಲೆಯು ಪ್ರಾಚೀನ ಕಾಲದಿಂದಲೂ ಮನುಷ್ಯನಿಗೆ ಕರಗತವಾಗಿ ಬೆಳೆದುಬಂದಿದೆ ಎಂದರು. ಕಲಾ ಶಿಬಿರಗಳು ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿಗಳಲ್ಲಿ ಕರಕುಶಲ ಕಲೆಯನ್ನು ಕರಗತ ಮಾಡಿಕೊಂಡು ಉತ್ತಮ ಜೀವನ ಕಂಡುಕೊಳ್ಳಲು ಸಹಕಾರಿಯಾಗಿವೆ ಎಂದು ವೆಂಕಟನಾಯಕ್ ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ, ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಕಲಾಭಿರುಚಿ ಜತೆಗೆ ಜೀವನದಲ್ಲಿ ಕಲಾ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗಿವೆ ಎಂದರು. ಶಿಬಿರದ ಸಂಚಾಲಕರೂ ಆದ ಕರಕುಶಲ ಕರ್ಮಿ ಕಲಾವಿದ ಜಿ.ಧರ್ಮಪ್ಪ ಮಾತನಾಡಿ, ಜನರಿಗೆ ಕರಕುಶಲ ಕಲೆಗಳ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಲು ಇಂತಹ ಶಿಬಿರ ನಡೆಸಲಾಗುತ್ತಿದೆ ಎಂದರು. ವಿಸ್ತರಣಾ ಕೇಂದ್ರದ ಅಭಿವೃದ್ಧಿ ಅಧಿಕಾರಿ ಎಂ.ಬಿ.ಶಾಬಿರಾ ಮಾತನಾಡಿದರು. ಶಿಬಿರಾರ್ಥಿಗಳಾದ ಮಂಜುನಾಥ್, ಅನುಷಾ, ಪ್ರಿಯ, ಮೋನಿಷಾ, ದೃಶ್ಯ ಶಿಬಿರದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕ ಜಿ.ಮಹೇಶ್ ನಿರ್ವಹಿಸಿದರು.









