
ನಾಪೋಕ್ಲು ಮೇ 13 NEWS DESK : ಮೊಬೈಲ್ ವೈದ್ಯಕೀಯ ಘಟಕವನ್ನು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ, ವಿರಾಜಪೇಟೆಯ ತಮ್ಮ ಕಚೇರಿ ಆಭರಣದಲ್ಲಿ ಉದ್ಘಾಟಿಸಿದರು. ಬಳಿಕ ಘಟಕದ ವಾಹನವನ್ನು ಚಾಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಬೆಂಗಳೂರು ಮೂಲದ ಟ್ರಾನ್ಸ್ ಫಾರ್ಮಿಂಗ್ ಟುಮಾರೊ ಫೌಂಡೇಶನ್ (ಟಿಟಿಎಫ್) ಎನ್ಜಿಎನ್ ಆನಂದ ರಾವ್, ಸಂಸ್ಥಾಪಕ ಆಸ್ಟೆರ್ ವಾಲೆಂಟಿಯರ್ಸ್ ಹಾಗೂ ಸೊಲ್ಯೂಷನ್ಸ್ ಅವರ ಸಹಯೋಗದಲ್ಲಿ ಮೊಬೈಲ್ ಮೆಡಿಕಲ್ ಯೂನಿಟನ್ನು ಕೊಡಗಿಗೆ ಕಲ್ಪಿಸಿಕೊಟ್ಟಿದ್ದಾರೆ. ಈ ಘಟಕವು ಕೊಡಗಿನ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಲಿದ್ದು, ಜನರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸುತ್ತದೆ. ಇದು ಅಧಿಕ ರಕ್ತದೊತ್ತಡ, ಮಧುಮೇಹ, ಬಿಎಂಐ, ತೂಕ, ಈ.ಸಿ.ಜಿ ಮುಂತಾದ ಪರೀಕ್ಷೆಗಳನ್ನು ನಡೆಸಲಿದ್ದು, ಇದು ಒಬ್ಬ ವೈದ್ಯರು, ನರ್ಸ್ ಹಾಗೂ ಚಾಲಕರ ತಂಡವನ್ನು ಒಳಗೊಂಡಿರುತ್ತದೆ. ಒಂದು ದಿವಸಕ್ಕೆ ಒಂದು ಗ್ರಾಮದಂತೆ ನಿರಂತರ 10 ವರ್ಷಗಳ ಅವಧಿಗೆ ಕಾರ್ಯ ನಿರ್ವಹಿಸಲಿದೆ. ಇದು ಕೊಡಗಿನ ಕಾಫಿ ತೋಟದ ಕಾರ್ಮಿಕರು, ಕೂಲಿ ಕಾರ್ಮಿಕರು ಹಾಗೂ ಬಡವರ ಆರೋಗ್ಯವನ್ನು ಗುರಿಯಾಗಿಟ್ಟುಕೊಂಡು ಸಹಕರಿಸಲಿದೆ ಎಂದು ಎನ್ಜಿಒ ಕೊಡಗಿನ ಪ್ರಾಜೆಕ್ಟ್ ಮೆನೇಜರ್ ಬಿ.ಹೆಚ್.ಸಂಪ್ರೀತ್ ಮಾಹಿತಿ ನೀಡಿದರು. ಈ ಸಂದರ್ಭ ವಿರಾಜಪೇಟೆ ಪುರಸಭೆಯ ಸದಸ್ಯರಾದ ರಾಫಿ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ರಂಜಿ ಪೂಣಚ್ಚ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಕೆಪಿಸಿಸಿ ಸದಸ್ಯ ಬಾಚಮಂಡ ಲವ ಚಿನ್ನಪ್ಪ ಹಾಗೂ ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ , ಅಜ್ಜಿಕುಟ್ಟಿರ ನಿರಾನ್ ಕಾರ್ಯಪ್ಪ, ನಿವೃತ ಶಿಕ್ಷಕ ಮಂಜುನಾಥ್, ಪಕ್ಷದ ಕಾರ್ಯಕರ್ತರು ಟಿಟಿಎಫ್ ಪ್ರಮುಖರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ










