
ಮಡಿಕೇರಿ ಮೇ 13 NEWS DESK : ಮಹಾಮೈತ್ರಿ ಬುದ್ಧ ವಿಹಾರದ ಪದಾಧಿಕಾರಿಗಳು ಹಾಗೂ ದಲಿತ ಸಂಘರ್ಷ ಸಮಿತಿಯ ಪ್ರಮುಖರು ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಬಳಿಯ ದಂಡಳ್ಳಿ ಮಾದ್ರೆ ಗ್ರಾಮದಲ್ಲಿ ಅರಳಿ ಗಿಡ ನೆಟ್ಟು ಬುದ್ಧ ಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಮಹಾಮೈತ್ರಿ ಬುದ್ಧ ವಿಹಾರ ನಿರ್ಮಾಣ ಮಾಡಲು ಹೊರಟಿರುವ ಮಾದ್ರೆ ಗ್ರಾಮದ ಜಾಗದಲ್ಲಿ ಭಗವಾನ್ ಗೌತಮ ಬುದ್ಧರ ಜನ್ಮದಿನದ ಅಂಗವಾಗಿ ಬೋಧಿವೃಕ್ಷದ ಸಂಕೇತವಾದ ಅರಳಿ ಗಿಡ ನೆಟ್ಟು ಬುದ್ಧ ಸಂದೇಶವನ್ನು ಸ್ಮರಿಸಿದರು. ಮಹಾಮೈತ್ರಿ ಬುದ್ಧ ವಿಹಾರದ ಸಂಯೋಜಕರು ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಜೆ.ಆರ್.ಪಾಲಾಕ್ಷ ಅವರು ಮಾತನಾಡಿ ಭಗವಾನ್ ಬುದ್ಧ ಮಹಾಮೈತ್ರಿ ಟ್ರಸ್ಟ್ ವತಿಯಿಂದ ಈ ಜಾಗದಲ್ಲಿ ಅಂಬೇಡ್ಕರ್ ಭವನ ಹಾಗೂ ಬುದ್ಧ ವಿಹಾರ ಧ್ಯಾನ ಮಂದಿರವನ್ನು ಸ್ಥಾಪಿಸಲಾಗುವುದು. ಆ ಮೂಲಕ ಜನರಲ್ಲಿ ವೈಚಾರಿಕತೆಯ ಪ್ರಜ್ಞೆ ಮೂಡಿಸಲಾಗುವುದು. ಭಗವಾನ್ ಬುದ್ಧರ ಆಶಯದಂತೆ ವೃದ್ಧಾಶ್ರಮವನ್ನು ನಿರ್ಮಿಸಿ ವಯೋವೃದ್ಧರ ಆರೈಕೆ ಮಾಡಲಾಗುವುದು ಮತ್ತು ಸಮಾಜಕ್ಕೆ ಜನಸೇವೆಯ ಸಂದೇಶವನ್ನು ನೀಡಲಾಗುವುದು. ಜನಪರ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಪ್ರಗತಿಯ ಚಟುವಟಿಕೆಗಳನ್ನು ನಡೆಸಲಾಗುವುದು. ಜ್ಞಾನ ಕೇಂದ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು. ಈ ಕಾರ್ಯಗಳಿಗೆ ಸರ್ವರೂ ಸಹಕರಿಸಬೇಕೆಂದು ಮನವಿ ಮಾಡಿದರು. ಮಹಾಮೈತ್ರಿ ಬುದ್ಧ ವಿಹಾರ ಟ್ರಸ್ಟ್ ನ ಕಾರ್ಯದರ್ಶಿ ಎಂ.ಎಸ್ ವೀರೇಂದ್ರ ಅವರು ಮಾತನಾಡಿ ಇಲ್ಲಿ ನಿರ್ಮಾಣವಾಗುವ ಬುದ್ಧ ವಿಹಾರ ಮಲೆನಾಡು ಭಾಗದಲ್ಲಿ ಖ್ಯಾತಿ ಗಳಿಸಬೇಕು. ಬುದ್ಧ, ಬಸವ, ಡಾ.ಅಂಬೇಡ್ಕರ್, ಕುವೆಂಪು ಅವರ ಚಿಂತನೆ, ಆಶಯಗಳು ಮತ್ತು ಆದರ್ಶಗಳು ಸಮಾಜದಲ್ಲಿ ಪಸರಿಸಬೇಕು, ಹಲವು ಕಾರ್ಯಕರ್ತರು ರೂಪುಗೊಳ್ಳಬೇಕು ಎಂದರು. ಎಲ್ಲರ ಸಹಕಾರ ಪಡೆದು ಸಮಾಜಮುಖಿ ಸೇವಗಳಿಗೆ ಪೂರಕವಾಗಿ ಟ್ರಸ್ಟ್ ಕಾರ್ಯನಿರ್ವಹಿಸಲಿದೆ. ಬುದ್ಧನ ಶಾಂತಿ, ಸಹನೆ, ಪ್ರೀತಿ ಹಾಗೂ ವೈಚಾರಿಕತೆಯ ದೃಷ್ಟಿಕೋನ ಎಲ್ಲರಲ್ಲೂ ಬೆಳೆಯಬೇಕು. ಉತ್ತಮ ಕಾರ್ಯವನ್ನು ಮಾಡುವ ಮೂಲಕ ಟ್ರಸ್ಟ್ ಸಮಾಜಕ್ಕೆ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಲಾತಂಡದ ರಾಮ ಅವರು ಬುದ್ಧ ಗೀತೆಗಳನ್ನು ಹಾಡಿದರು, ಶಿಕ್ಷಕ ಶಿವಣ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ದುಂಡಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಸಿ.ಬಿ.ಅಬ್ಬಾಸ್, ದಲಿತ ಮುಖಂಡರುಗಳಾದ ರಾಮು, ಮುತ್ತಣ್ಣ, ವಸಂತ, ಮಾದ್ರೆ ಗ್ರಾಮದ ಮಂಜುನಾಥ್, ಹೊನ್ನಪ್ಪ, ಕುಮಾರಸ್ವಾಮಿ, ಪೃಥ್ವಿರಾಜ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು.









