
ಮಡಿಕೇರಿ ಮೇ 13 NEWS DESK : ಆಡಳಿತ ಪಕ್ಷ ಕಾಂಗ್ರೆಸ್ ರಾಜಕೀಯ ದುರುದ್ದೇಶದಿಂದ ಪೊಲೀಸರ ಮೇಲೆ ಒತ್ತಡ ಹೇರಿ, ಬಿಜೆಪಿ ಮಂದಿಯನ್ನು ಗುರಿ ಮಾಡಿ ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಆರೋಪಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ರಾಜಾಸೀಟು ರಸ್ತೆಯಲ್ಲಿ ವಾಹನಗಳ ನಿಲುಗಡೆ ಶುಲ್ಕ ವಸೂಲಿಗೆ ಸಂಬಂಧಿಸಿದಂತೆ ಬಿಜೆಪಿ ನಗರಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ವಿರುದ್ಧ ಮೊಕದ್ದಮೆ ದಾಖಲಿಸಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ವಾಹನಗಳ ನಿಲುಗಡೆ ಶುಲ್ಕ ವಸೂಲಾತಿ ಕುರಿತು ದೂರು ಬಂದ ಹಿನ್ನೆಲೆ ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಗುತ್ತಿಗೆ ನಿಯಮಕ್ಕೆ ವಿರುದ್ಧವಾಗಿ ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಿ ಶುಲ್ಕ ವಸೂಲಿ ಮಾಡುತ್ತಿರುವುದು ಮತ್ತು ನಿಗಧಿತ ದರಕ್ಕಿಂತ ಅಧಿಕ ಶುಲ್ಕ ವಸೂಲಾತಿಯಲ್ಲಿ ತೊಡಗಿರುವುದು ಕಂಡು ಬಂದಿದೆ. ಸಹಜವಾಗಿಯೇ ನಗರಸಭಾ ಆಡಳಿತ ಮಂಡಳಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಸ್ಥಳದಲ್ಲಿದ್ದ ನಗರಸಭಾ ಸದಸ್ಯರೂ ಆಗಿರುವ ಬಿಜೆಪಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಅವರು ಶುಲ್ಕ ವಸೂಲಾತಿಯ ಯಂತ್ರವನ್ನು ಕಸಿದುಕೊಂಡು ನಗರಸಭಾ ಅಧಿಕಾರಿಗಳಿಗೆ ನೀಡಿದ್ದಾರೆಯೇ ಹೊರತು ಯಂತ್ರವನ್ನು ಎಲ್ಲಿಗೂ ತೆಗೆದುಕೊಂಡು ಹೋಗಿಲ್ಲ.
ಆದರೆ ವಿನಾಕಾರಣ ಗಂಭೀರ ಆರೋಪ ಹೊರಿಸಿ ಉಮೇಶ್ ಸುಬ್ರಮಣಿ ಹಾಗೂ ಪ್ರಧಾನ ಕಾರ್ಯದರ್ಶಿ ಕವನ್ ಕಾವೇರಪ್ಪ ಅವರುಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕವನ್ ಕಾವೇರಪ್ಪ ಅವರು ಸ್ಥಳದಲ್ಲೇ ಇರಲಿಲ್ಲ ಎಂದು ತಿಳಿಸಿದ ರವಿ ಕಾಳಪ್ಪ, ರಾಜಕೀಯ ದುರುದ್ದೇಶಕ್ಕಾಗಿ ಕಾಂಗ್ರೆಸ್ಸಿಗರು ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಪೊಲೀಸ್ ಇಲಾಖೆ ನಾಗರೀಕರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ ಕೊಡಗಿನ ಪೊಲೀಸರು ಕಾಂಗ್ರೆಸ್ ಪಕ್ಷದ ಏಜೆಂಟರುಗಳಂತೆ ವರ್ತಿಸುತ್ತಿದ್ದಾರೆ ಮತ್ತು ಬಿಜೆಪಿ ಕಾರ್ಯಕರ್ತರನ್ನು ಮಟ್ಟ ಹಾಕುವ ಪ್ರಯತ್ನಗಳು ನಡೆಯುತ್ತಿದೆ ಎಂದು ಆರೋಪಿಸಿದರು. ಕಳೆದ 20- 25 ವರ್ಷಗಳಿಂದ ನಾವೂ ಕೂಡ ಶಾಸಕರಾಗಿದ್ದೆವು, ಆದರೆ ನಮ್ಮ ಅವಧಿಯಲ್ಲಿ ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ. ರಾಜಕೀಯ ದುರುದ್ದೇಶಕ್ಕಾಗಿ ಪ್ರಕರಣ ದಾಖಲಿಸಿಲ್ಲ. ರಾಜಾಸೀಟು ರಸ್ತೆಯ ವಾಹನ ನಿಲುಗಡೆ ಶುಲ್ಕದ ವಿಚಾರವನ್ನು ಕಾಂಗ್ರೆಸ್ ರಾಜಕೀಯಕ್ಕಾಗಿ ಬಳಸಿಕೊಂಡಿದೆ. ಶುಲ್ಕ ವಸೂಲಾತಿ ಮಾಡುತ್ತಿದ್ದವರ ವಾಕಿಟಾಕಿ ಮತ್ತು ಯಂತ್ರವನ್ನು ಎಳೆದು ಅಧಿಕಾರಿಗಳಿಗೆ ನೀಡಲಾಗಿದೆ. ಆದರೆ ಪೊಲೀಸರು ಒತ್ತಡಕ್ಕೆ ಮಣಿದು ದರೋಡೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ವರ್ತನೆಯನ್ನು ವಿರೋಧಿಸಿ ಬೀದಿಗಿಳಿದು ಹೋರಾಟ ನಡೆಸುತ್ತೇವೆ ಮತ್ತು ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು. ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ಅವರು ಮಾತನಾಡಿ ಕಾಂಗ್ರೆಸ್ಸಿಗರ ಒತ್ತಡಕ್ಕೆ ಮಣಿದು ಪೊಲೀಸರು ಗಂಭೀರ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಸುಳ್ಳು ಮೊಕ್ಕದ್ದಮೆ ದಾಖಲಿಸಿ ಬಿಜೆಪಿ ಕಾರ್ಯಕರ್ತರಲ್ಲಿ ಭೀತಿ ಮೂಡಿಸುತ್ತಿರುವ ಕಾಂಗ್ರೆಸ್ ಮನೋಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಜನರಿಂದ ಆಯ್ಕೆಯಾದ ಸದಸ್ಯರುಗಳನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಗೂಂಡಾಗಳು ಹಾಗೂ ಪುಂಡಾಟಿಕೆ ನಡೆಸುತ್ತಿರುವವರು ಎಂದು ಅವಮಾನ ಮಾಡಿದ್ದಾರೆ. ಇದು ಮತನೀಡಿ ಗೆಲ್ಲಿಸಿದ ಜನರಿಗೆ ಮಾಡಿದ ಅಪಮಾನವಾಗಿದ್ದು, ತಕ್ಷಣ ತಾವು ನೀಡಿದ ಹೇಳಿಕೆಯನ್ನು ಜಿಲ್ಲಾಧ್ಯಕ್ಷರು ವಾಪಾಸ್ಸು ಪಡೆಯಬೇಕೆಂದು ಒತ್ತಾಯಿಸಿದರು. ರಾಜಾಸೀಟು ರಸ್ತೆಯಲ್ಲಿ ನಿಗಧಿಗಿಂತ ಅಧಿಕ ಶುಲ್ಕವನ್ನು ಪ್ರವಾಸಿಗರಿಂದ ವಸೂಲಿ ಮಾಡಲಾಗುತ್ತಿದೆ. ಗಾಂಧಿ ಮೈದಾನದಲ್ಲಿ ನಿಯಮ ಬಾಹಿರವಾಗಿ ವಾಹನ ನಿಲುಗಡೆಗೆ ಅವಕಾಶ ನೀಡಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದನ್ನು ನಗರಸಭಾ ಪ್ರತಿನಿಧಿಗಳಾಗಿ ನಾವು ಪ್ರಶ್ನಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷೆ ಕಲಾವತಿ, ಬಿಜೆಪಿ ವಕ್ತಾರ ತಳೂರು ಕಿಶೋರ್ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್ ಉಪಸ್ಥಿತರಿದ್ದರು.









