ಮಡಿಕೇರಿ NEWS DESK ಮೇ 18 : ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮದ ನಿವಾಸಿ ಗುತ್ತಿಗೆದಾರ ಸಂಪತ್ ಶಂಭು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಸೋಮವಾರಪೇಟೆಯ ಹಾನಗಲ್ಲು ಗ್ರಾಮದ ಕಿರಣ್ ಬಿ.ಎಂ (44), ಚೌಡ್ಲು ಗ್ರಾಮದ ಗಣಪತಿ ಪಿ.ಎಂ (44) ಹಾಗೂ ಹಾನಗಲ್ಲು ಗ್ರಾಮದ ಕಿರಣ್ ನ ಪತ್ನಿ ಸಂಗೀತ ಬಂಧಿತ ಆರೋಪಿಗಳು. ಕೃತ್ಯಕ್ಕೆ ಬಳಸಿದ ಕೋವಿ, ಕತ್ತಿ, ದೊಣ್ಣೆ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯ ಎಸಗಲು ಆರೋಪಿಗಳಿಗೆ ಸಹಕರಿಸಿದ ಮತ್ತು ಆರೋಪಿಗಳಾದ ಕಿರಣ್ ಹಾಗೂ ಗಣಪತಿ ತಲೆಮರೆಸಿಕೊಳ್ಳಲು ಸಹಕರಿಸಿದ ಇತರೆ ಆರೋಪಿಗಳನ್ನು ಆದಷ್ಟು ಶೀಘ್ರ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೇ 9 ರಂದು ತಮ್ಮ ಸ್ನೇಹಿತ ಜಾನ್ ಪೌಲ್ ಅವರ ಕಾರನ್ನು ಕೋರಿಕೆಯ ಮೇರೆಗೆ ತೆಗೆದುಕೊಂಡು ಹೋಗಿದ್ದ ಸಂಪತ್ ಅವರು ಮೇ 10 ರ ರಾತ್ರಿಯಾದರು ಬಾರದೆ ಇದ್ದಾಗ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಕಲೇಶಪುರ ತಾಲ್ಲೂಕಿನ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದಲ್ಲಿ ಮೇ 10 ರಂದು ಕಾರು ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತದ ಕಲೆ ಕಂಡು ಬಂದಿದ್ದು, ಯಸಳೂರು ಪೊಲೀಸರು ಕಾರು ಮಾಲೀಕರ ಪತ್ತೆಗೆ ತನಿಖೆ ಕೈಗೊಂಡರು. ಸಂಪತ್ ಅವರು ತೆಗೆದುಕೊಂಡು ಹೋಗಿದ್ದ ಕಾರು ಇದು ಎಂದು ಖಾತ್ರಿಯಾಗಿತ್ತು. ಮೇ 14 ರಂದು ಸಕಲೇಶಪುರ ತಾಲ್ಲೂಕಿನ ವಣಗೂರು ಅರಣ್ಯದಲ್ಲಿ ಸಂಪತ್ ಅವರ ಮೃತದೇಹ ಪತ್ತೆಯಾಗಿತ್ತು. ಸ್ಥಳಕ್ಕೆ ಕೊಡಗು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಮೇ 16 ರಂದು ಕಿರಣ್ ನನ್ನು ಬೆಂಗಳೂರಿನಲ್ಲಿ, ಮೇ 17 ರಂದು ಗಣಪತಿಯನ್ನು ಬೆಳ್ತಂಗಡಿಯಲ್ಲಿ ಹಾಗೂ ಮೇ 18 ರಂದು ಸಂಗೀತಳನ್ನು ಸೋಮವಾರಪೇಟೆಯಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಯಿತು ಎಂದು ಎಸ್ಪಿ ಕೆ.ರಾಮರಾಜನ್ ವಿವರಿಸಿದರು. ಕೊಲೆಯಾದ ಸಂಪತ್ ಹಾಗೂ ಮೂವರು ಆರೋಪಿಗಳು ಸ್ನೇಹಿತರಾಗಿದ್ದು, ಲಕ್ಷಾಂತರ ರೂ. ಹಣಕಾಸಿನ ವ್ಯವಹಾರ ಕೊಲೆಗೆ ಕಾರಣ ಎಂದು ಆರೋಪಿಸಲಾಗಿದೆ. ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಪಿ.ಚಂದ್ರಶೇಖರ್, ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಎಸ್.ಮಹೇಶ್ ಕುಮಾರ್, ಕುಶಾಲನಗರ ವೃತ್ತ ಸಿಪಿಐ ದಿನೇಶ್ಕುಮಾರ್, ಪಟ್ಟಣ ಠಾಣೆ ಪಿಎಸ್ಐ ಹೆಚ್.ಟಿ.ಗೀತಾ, ಎಎಸ್ಐ ಮಂಜುನಾಥ, ಗ್ರಾಮಾಂತರ ಠಾಣೆ ಪಿಎಸ್ಐ ಪಿ.ಮೋಹನ್ರಾಜ್, ಎಎಸ್ಐ ವಿ.ಜಿ.ವೆಂಕಟೇಶ್, ಪಿಐ ಬಿ.ಜಿ.ಪ್ರಕಾಶ್, ಸೋಮವಾರಪೇಟೆ ಪಿಐ ಎಂ.ಮುದ್ದು ಮಾದೇವ, ಪಿಎಸ್ಐ ಗೋಪಾಲ್, ಎಎಸ್ಐ ಕಾಳಿಯಪ್ಪ, ಗೋಣಿಕೊಪ್ಪ ಸಿಪಿಐ ಶಿವರಾಜ್ ಆರ್. ಮುದೋಳ್, ಜಿಲ್ಲಾ ಗುಪ್ತದಳದ ಪಿಐ ಮೇದಪ್ಪ ಐ.ಪಿ, ಡಿಸಿಆರ್ಬಿ ಪಿಐ ಚಂದ್ರಶೇಖರ್, ನಾಪೋಕ್ಲು ಪಿಎಸ್ಐ ಮಂಜುನಾಥ್, ಶ್ರೀಮಂಗಲ ಪಿಎಸ್ಐ ರವೀಂದ್ರ, ವಿರಾಜಪೇಟೆ ಠಾಣೆ ಎಎಸ್ಐ ಮಂಜುನಾಥ್, ಪೊಲೀಸ್ ಸಿಬ್ಬಂದಿಗಳಾದ ಶನಿವಾರಸಂತೆ ಜಿ.ಆರ್.ಉದಯಕುಮಾರ್, ಸುಂಟಿಕೊಪ್ಪ ಪ್ರವೀಣ್, ಸೋಮವಾರಪೇಟೆ ಕೆ.ಎಸ್.ಸುದೀಶ್ ಕುಮಾರ್, ಶರತ್, ಕುಶಾಲನಗರ ಸುನೀಲ್ ಕುಮಾರ್ ಹೆಚ್.ಸಿ, ಗಾಯಿತ್ರಿ, ದಿವ್ಯ, ಶಶಿಕಲಾ, ಸುನಿಲ್, ಮಹೇಂದ್ರ ಕೆ.ಎಸ್, ಬಸಪ್ಪ, ಸ್ವಾಮಿ, ವಿರಾಜಪೇಟೆ ಜೋಶ್ ನಿಶಾಂತ್, ಗಿರೀಶ್, ನಾಪೋಕ್ಲು ಮಧು, ಡಿಸಿಆರ್ಬಿ ಯೋಗೇಶ್, ನಿರಂಜನ್, ಶರತ್, ರಾಜೇಶ್.ಸಿ.ಕೆ ಹಾಗೂ ಪ್ರವೀಣ್.ಬಿ.ಕೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.











