
ಮಡಿಕೇರಿ ಮೇ 23 NEWS DESK : ನಗರದಲ್ಲಿ ಅತ್ಯಪರೂಪದ ವಿವಿಧ ಬಗೆಯ ಮಾವು ಮತ್ತು ಹಲಸಿನ ಹಣ್ಣು ಘಮಘಮಿಸುತ್ತಿದೆ. ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಮತ್ತು ಹಾಪ್ ಕಾಮ್ಸ್ ವತಿಯಿ0ದ ನಗರದ ಹಾಪ್ ಕಾಮ್ಸ್ ನಲ್ಲಿ ಮೇ 26ರ ವರೆಗೆ ನಡೆಯುವ `ಮಾವು ಮತ್ತು ಹಲಸು ಮೇಳವನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಾವು ಮತ್ತು ಹಲಸು ಮೇಳದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಜನರು ಬರುವುದರಿಂದ ಬಹಳ ಖುಷಿ ಪಡುತ್ತೇನೆ ಎಂದರು. ಮಾವು ಮತ್ತು ಹಲಸು ಮೇಳವನ್ನು ಈ ವರ್ಷವೂ ನಾಲ್ಕು ದಿನಗಳವರೆಗೆ ಏರ್ಪಡಿಸಲಾಗಿದೆ ಎಂದರು. ಮಾವಿನ ಹಣ್ಣುಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚು ಇರುತ್ತದೆ ಹಾಗೂ ತೋಟಗಾರಿಕೆ ಇಲಾಖೆ ಮತ್ತು ಹಾಪ್ ಕಾಮ್ಸ್ ವತಿಯಿಂದ ಈ ಮೇಳ ನಡೆಯುತ್ತಿದೆ ಎಂದು ಹೇಳಿದರು. ಕೊಡಗಿನಲ್ಲಿ ಮಾವಿನ ಮೇಳ ಆಯೋಜಿಸಿರುವುದರಿಂದ ಜನರಿಗೆ ಬೇರೆ ಬೇರೆ ರೀತಿಯ ಮಾವಿನ ಹಣ್ಣುಗಳು ಸಿಗಲು ಸಾಧ್ಯವಾಗುತ್ತದೆ ಎಂದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಎಚ್.ಆರ್.ಯೋಗೇಶ್ ಅವರು ಮಾತನಾಡಿ ನೈಸರ್ಗಿಕವಾಗಿ ಮಾಗಿಸಿದ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಮಾವು ಮೇಳದ ಉದ್ದೇಶವಾಗಿದೆ ಎಂದು ತಿಳಿಸಿದರು. ಮಾವು ಮೇಳದಲ್ಲಿ ಮಲಗೋವಾ, ಸಿಂಧೂರಿ, ರಸಪೂರಿ, ತೋತಾಪುರಿ, ಬಾದಾಮಿ, ಮಲ್ಲಿಕಾ, ದಸೇರಿ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿ ರೈತರಿಂದ ಗ್ರಾಹಕರಿಗೆ ಯೋಗ್ಯ ಬೆಲೆಗೆ ನೇರ ಮಾರಾಟ ಮಾಡಲಾಗುತ್ತದೆ ಎಂದು ಯೋಗೇಶ್ ಹೇಳಿದರು. ಕೊಡಗು ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷರಾದ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷರಾದ ಮಲ್ಲಂಡ ಮಧುದೇವಯ್ಯ, ನಿರ್ದೇಶಕರಾದ ನಾಗೇಶ್ ಕುಂದಲ್ಪಾಡಿ, ಬಿ.ಎ.ಹರೀಶ್, ಎಸ್.ಪಿ.ಪೊನ್ನಪ್ಪ, ಬೇಬಿ ಪೂವಯ್ಯ, ಎಂ.ಮನೋಹರ್, ಸುವಿನ್ ಗಣಪತಿ, ಉಮೇಶ್ರಾಜ ಅರಸ್, ಸುಧೀರ್, ಹಾಪ್ಕಾಮ್ಸ್ ಸಿಇಒ ರೇಷ್ಮ ಗಿರೀಶ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮುತ್ತಪ್ಪ ಇತರರು ಇದ್ದರು. ಮೇಳದಲ್ಲಿ ಮಾವಿನ ಹಣ್ಣಿನ ವಿವಿಧ ತಳಿಗಳಾದ ಮಲಗೋಬ, ಸಿಂದೂರ, ರಸಪುರಿ, ತೋತಪುರಿ, ಬಾದಾಮಿ, ಮಲ್ಲಿಕ, ದಶೇರಿ ತಳಿಗಳು ಗಮನ ಸೆಳೆಯುತ್ತಿದೆ. ತುಮಕೂರು, ಕೋಲಾರ, ರಾಮನಗರ, ಮಂಡ್ಯ ವಿಭಾಗಗಳಿಂದ ಆಗಮಿಸಿದ ಬೆಳೆಗಾರರು ತಾವು ಬೆಳೆದ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದಾರೆ. ಸುಮಾರು 2 ಕೆ.ಜಿ. ಗೂ ಹೆಚ್ಚಿನ ತೂಕದ ‘ವಾಲಜ’ ಹೆಸರಿನ ಭಾರೀ ಗಾತ್ರದ ಮಾವು ಗ್ರಾಹಕರ ಗಮನ ಸೆಳೆಯುತ್ತಿದೆ. ಹಲಸಿನ ಕಸಿ ಗಿಡಗಳು :: ದಕ್ಷಿಣ ಕನ್ನಡದ ನವನೀತ ನರ್ಸರಿಯ ಮಳೆಗೆಯಲ್ಲಿ ಕಸಿಗಟ್ಟಿದ ವಿವಿಧ ಹಲಸಿನ ಗಿಡಗಳನ್ನು ಮಾರಾಟಕ್ಕೆ ಇಡಲಾಗಿದೆ. ಗಮ್ ಲೆಸ್ ಹಲಸು, ಚೆಂಪಡ್ಕ, ಸಿಂಗಾಪುರ ಬ್ಲಾಕ್, ಡಯಾಂಗ್ ಸೂರ್ಯ ಮೊದಲಾದ ತಳಿಗಳ ಗಿಡಗಳು ಆಸಕ್ತರಿಗೆ ಲಭ್ಯವಿದೆ.









