
ಗೋಣಿಕೊಪ್ಪ ಜೂ.3 NEWS DESK : ಪೌರಕಾರ್ಮಿಕರ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಈ ಬಗ್ಗೆ ನಿರ್ಲಕ್ಷ್ಯ ತಾಳವುದು ಸರ್ಕಾರದ ನಡೆಗೆ ಶೋಭೆಯಲ್ಲ ಎಂದು ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ನೆಲ್ಲಿರ ಚಲನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೋಣಿಕೊಪ್ಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಪೌರಕಾರ್ಮಿಕರ ಕನಿಷ್ಠ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ನಡೆದಿದೆ. ಬಹಳಷ್ಟು ನೌಕರರ ಖಾಯಂಗೊಳಿಸಲಾಗಿದೆ. ವೇತನವನ್ನು ಹೆಚ್ಚಿಸಲಾಗಿದೆ. ಯಡಿಯೂರಪ್ಪ ಸರ್ಕಾರ ಮತ್ತು ಜಗದೀಶ್ಶೆಟ್ಟರ್ ಮುಖ್ಯ ಮಂತ್ರಿಗಳಾಗಿದ್ದಾಗ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವ ಎಲ್ಲ ಪ್ರಯತ್ನಗಳು ನಡೆದಿದೆ. ಆದರೆ, ಇಂದಿನ ಕಾಂಗ್ರೆಸ್ ಸರ್ಕಾರ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ನಿರ್ಲಕ್ಷ ಹೊಂದಿರುವುದು ಪೌರಕಾರ್ಮಿಕರ ಮೇಲೆ ಕಾಳಜಿ ಮತ್ತು ಗೌರವ ಇಲ್ಲ ಎಂಬುದನ್ನು ಸಾಬೀತುಪಡಿಸುವ ನಡೆಯಾಗಿದೆ ಎಂದು ಆರೋಪಿಸಿದರು. ವಿರಾಜಪೇಟೆಯಲ್ಲಿ ಪೌರಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಾಗಿದೆ. ಅವರನ್ನು ಬೆದರಿಸಿ ಅವರ ಹೋರಾಟವನ್ನು ಮೋಟಕುಗೊಳಿಸುವ ಪ್ರಯತ್ನ ನಡೆದಿರುವುದು ವಿಪರ್ಯಾಸ ಎಂದು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಅವರ ಹಕ್ಕಿಗಾಗಿ ಹೋರಾಡುವ ವ್ಯವಸ್ಥೆಯನ್ನು ಒದಗಿಸಿಕೊಡಲಾಗಿದೆ. ಅಂತಹ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿರುವುದು ವಿಷಾದಕರ ಬೆಳವಣಿಗೆ ಎಂದು ಹೇಳಿದರು. ಪೌರಕಾರ್ಮಿಕರು ರಾಜ್ಯಾದ್ಯಂತ ಪ್ರತಿಭಟನೆಗೆ ಇಳಿದಿದ್ದು, ಮನವಿ ಪತ್ರವನ್ನು ಸಂಬಂಧಿಸಿದ ಸಚಿವರು ಹಾಗೂ ಇಲಾಖೆಗಳಿಗೆ ಸಲ್ಲಿಸಿದ್ದಾರೆ. ಪೌರಕಾರ್ಮಿಕರ ಕನಿಷ್ಠ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಇಲಾಖೆ ಸಚಿವರಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಲು ಶಾಸಕರು ಪ್ರಯತ್ನಿಸಲಿ ಎಂದು ಒತ್ತಾಯಿಸಿದರು.









