
ಮಡಿಕೇರಿ ಜೂ.7 NEWS DESK : ಕೊಡಗು ಜಿಲ್ಲೆಯಾದ್ಯಂತ ನೆಲೆಸಿರುವ ಬಲಿಜ ಸಮಾಜ ಬಾಂಧವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗೆ ಪೂರಕವಾಗಿ ‘ಶ್ರೀ ಯೋಗಿನಾರಾಯಣ ಕೊಡಗು ಜಿಲ್ಲಾ ಬಲಿಜ’ ಸಂಘವನ್ನು ಅಸ್ತಿತ್ವಕ್ಕೆ ತಂದು ನೋಂದಣಿ ಮಾಡಲಾಗಿದೆಯೆಂದು ಸಂಘದ ಜಿಲ್ಲಾಧ್ಯಕ್ಷರಾದ ಟಿ.ಜಿ.ಗಣೇಶ್ ನಾಯ್ಡು ಮೂರ್ನಾಡು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 35 ಸಾವಿರ ಬಲಿಜ ಸಮಾಜ ಬಾಂಧವರು ನೆಲೆಸಿದ್ದಾರೆ. ಇವರಲ್ಲಿ ಶಿಕ್ಷಣದ ಜಾಗೃತಿಯೊಂದಿಗೆ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಕಷ್ಟ ಸುಖಗಳಿಗೆ ನೆರವಾಗುವ ಉದ್ದೇಶದಿಂದ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆಯೆಂದರು. ಸಂಘದ ಮುಖೇನ ಸಮಾಜ ಬಾಂಧವರಿಗೆ ಯೋಗ್ಯ ಶಿಕ್ಷಣವನ್ನು ಒದಗಿಸುವ ನಿಟ್ಟಿನ ಪ್ರಯತ್ನ, ಅವರ ಸಂಕಷ್ಟಗಳಿಗೆ ಸ್ಪಂದಿಸಿ ನೆರವಾಗುವುದು, ಆರ್ಥಿಕ ಅಭಿವೃದ್ಧಿಗೆ ಪೂರಕ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡುವುದು, ಎಲೆ ಮರೆಯ ಕಾಯಿಯಂತಿರುವ ಸಮಾಜದ ಪ್ರತಿಭಾವಂತರನ್ನು ಗುರುತಿಸಿ ಬೆಳಕಿಗೆ ತರುವುದು ಹಾಗೂ ಸಮುದಾಯದ ಒಳಗಿನ ಯಾವುದೇ ಭಿನ್ನಾಭಿಪ್ರಾಯ ಗುಂಪುಗಾರಿಕೆಗಳನ್ನು ಇಲ್ಲವಾಗಿಸಿ ಸದೃಢವಾಗಿ ಬಲಿಜ ಸಮಾಜವನ್ನು ಕಟ್ಟುವುದು ಸಂಘದ ಪ್ರಮುಖ ಉದ್ದೇಶವಾಗಿದೆಯೆಂದು ತಿಳಿಸಿದರು. ಸಂಘವು ಆರಂಭಿಕ ಹಂತದಲ್ಲಿ ಪ್ರಮುಖವಾಗಿ ಬಲಿಜ ಸಮಾಜದಲ್ಲಿರುವ ಕಡುಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಸಹಕರಿಸುವುದು ಮತ್ತು ಗುಡ್ಡ ಗಾಡಿನ ಪ್ರದೇಶಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪಟ್ಟಣ ಪ್ರದೇಶಗಳಲ್ಲಿ ಶಿಕ್ಷಣವನ್ನು ಒದಗಿಸಲು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವುದು ನಮ್ಮ ಮುಂದಿರುವ ಪ್ರಮುಖ ಗುರಿಯಾಗಿದೆಯೆಂದು ಗಣೇಶ್ ನಾಯ್ಡು ತಿಳಿಸಿದರು.
ಸಮುದಾಯ ಭವನದ ಚಿಂತನೆ :: ಬಲಿಜ ಸಮಾಜ ಬಾಂಧವರಿಗೆ ಅವರ ಕಾರ್ಯಕ್ರಮಗಳ ಆಯೋಜನೆಗೆ ಅವರದೇ ಆದ ಯಾವುದೇ ಸಮುದಾಯ ಭವನವಿಲ್ಲ. ಈ ಹಿನ್ನೆಲೆ ಶ್ರೀ ಯೋಗಿ ನಾರಾಯಣ ಕೊಡಗು ಜಿಲ್ಲಾ ಬಲಿಜ ಸಂಘದ ಮೂಲಕ ಸಮುದಾಯ ಭವನ ನಿರ್ಮಾಣದ ಉದ್ದೇಶವು ತಮ್ಮ ಮುಂದಿದೆ. ಸಮಾಜ ಬಾಂಧವರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವುದು, ಸಮಾಜದ ವಧು-ವರರ ಸಮಾವೇಶವನ್ನು ಕನಿಷ್ಟ ವರ್ಷಕ್ಕೆ ಎರಡು ಬಾರಿ ನಡೆಸುವುದು, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಒತ್ತು ನೀಡಲು ಸಂಘ ಉದ್ದೇಶಿಸಿರುವುದಾಗಿ ಮಾಹಿತಿ ನೀಡಿದರು. ಮೀಸಲಾತಿ 2ಎಗೆ ಆಗ್ರಹ :: ಬಲಿಜ ಸಮಾಜಕ್ಕೆ ಪ್ರಸ್ತುತ 2ಎ ಮೀಸಲಾತಿಯನ್ನು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತ ಮಾಡಲಾಗಿದೆ. ಈ ಸೌಲಭ್ಯವನ್ನು ಸರ್ಕಾರಿ ಉದ್ಯೋಗಗಳಿಗೂ ವಿಸ್ತರಿಸಲು ಸರ್ಕಾರ ಮುಂದಾಗಬೇಕೆಂದು ಗಣೇಶ್ ನಾಯ್ಡು ಆಗ್ರಹಿಸಿದರು. ಸದಸ್ಯತ್ವ :: ಸಂಘದ ಕೇಂದ್ರ್ರ ಕಛೇರಿ ಮೂರ್ನಾಡಿನಲ್ಲಿದ್ದು, ಸಂಘದ ಸದಸ್ಯತ್ವಕ್ಕೆ 200 ರೂ.ಗಳನ್ನು ನಿಗದಿಪಡಿಸಲಾಗಿದೆ. ಸಮಾಜದ ಪ್ರತಿಯೊಬ್ಬರು ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಆರ್. ಸುಬ್ರಮಣಿ, ಖಜಾಂಚಿ ಟಿ.ಎ.ಪ್ರಕಾಶ್, ನಿರ್ದೇಶಕರಾದ ಟಿ.ಆರ್. ಗಣೇಶ್ ಉಪಸ್ಥಿತರಿದ್ದರು.









