
ಸೋಮವಾರಪೇಟೆ ಜು.10 NEWS DESK : ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿಯನ್ನು ವಿಜ್ರಂಭಿಸಲಾಗುತ್ತಿದೆ ಎಂದು ಸ್ವತಂತ್ರ ಬಸವಲಿಂಗ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು. ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಆಯೋಜಿಸಲಾಗಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇರುವ ಬೃಹತ್ ರಾಷ್ಟ್ರದ ಭಾರತ ಮಾತೆ ಎಲ್ಲಾ ಜಾತಿ, ಜನಾಂಗದವರನ್ನು ತನ್ನೊಡಲಲ್ಲಿ ಇಟ್ಟುಕೊಂಡು ಸಲಹುತ್ತಿದ್ದಾಳೆ, 12ನೇ ಶತಮಾನದಲ್ಲೂ ಬಸವಣ್ಣಾರಾದಿಯಾಗಿ ಎಲ್ಲಾ ಶಿವಶರಣರು ಜಾತಿಯ ವಿರುದ್ಧ ಹೋರಾಡಿ ಎಲ್ಲಾರು ಒಂದೇ ಎಂದು ಪ್ರತಿಪಾದಿಸಿದರು. ಆದರೆ ಇಂದು ಏನಾಗಿದೆ ಎಲ್ಲೆಲ್ಲೂ ಜಾತಿ ಮೇಳೈಸಿದೆ ಎಲ್ಲಾ ರಂಗಗಳಲ್ಲೂ ಜಾತಿ, ಜಾತಿ ಎಂದು ವಿಷಾದಿಸಿದರು. ಸಮಾಜವನ್ನು ತಿದ್ದಿ, ತೀಡಬೇಕಾದ ಧಾರ್ಮಿಕ ಕ್ಷೇತ್ರವು ಇದಕ್ಕೆ ಹೊರತಾಗಿಲ್ಲ ಎಂದರು. ಈ ದೇಶದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಪಾಲಿಸುತ್ತಿರುವುದು, ಉಳಿಸುತ್ತಿರುವುದು, ಮಾತೆ ಭಾರತಾಂಬೆಗೆ ಗೌರವ ಸಲ್ಲಿಸುತ್ತಿರುವುದು ಭಾರತೀಯ ಜನತಾ ಪಕ್ಷ. ಆದ್ದರಿಂದ ನಾನು ಅಭಿಮಾನಿಯಾಗಿದ್ದೇನೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಇಂದು ಸಮಾಜದ ಯಾವುದೇ ಕ್ಷೇತ್ರದಲ್ಲಿಯಾದರೂ ತನ್ನದೇ ಗುರುವನ್ನು ಹೊಂದಿದೆ ಅವರ ಮಾರ್ಗದರ್ಶನದಿಂದ ಮಾತ್ರ ಉನ್ನತಿ ಸಾಧಿಸಲು ಸಾಧ್ಯವೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ನಮ್ಮ ಸಮಾಜದಲ್ಲಿ ಗುರುಗಳಿಗೆ ವಿಶೇಷವಾದ ಗೌರವ ಹಾಗೂ ಸ್ಥಾನವಿದೆ ಎಂದರು. ನಾವುಗಳು ಏನಾದರೂ ಸಾಧಿಸಬೇಕಾದರೆ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿಲ್ಲಾ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ವಿರುಪಾಕ್ಷ ಉಪಸ್ಥಿತರಿದ್ದರು. ಗುರು ಪೂರ್ಣಿಮೆಯ ಅಂಗವಾಗಿ ಸೋಮೇಶ್ವರ ದೇವಾಲಯದ ಅರ್ಚಕರಾದ ಚಿತ್ರಕುಮಾರ್ ಭಟ್, ನಿವೃತ್ತ ಶಿಕ್ಷರಾದ ತಂಗಮ್ಮ, ನಿವೃತ್ತ ಸೈನಿಕರಾದ ಚಂದ್ರಕುಮಾರ್, ಯೋಗ ಶಿಕ್ಷಕರಾದ ಪ್ರದೀಪ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.










