
ಮಡಿಕೇರಿ ಜು.11 NEWS DESK : ಭಾಗಮಂಡಲ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2023-25ನೇ ಸಾಲಿನ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸುಳ್ಯ ಕೆವಿಜಿ ಐಟಿಐ ನಿವೃತ್ತ ಪ್ರಾಂಶುಪಾಲ ಚಿದಾನಂದ ಗೌಡ ಬಾಳಿಲ, ವಿದ್ಯಾರ್ಥಿಗಳಿಗೆ ಸಂಸ್ಥೆ ಬೆಳೆದು ಬಂದ ಬಗ್ಗೆ ಮತ್ತು ಸಮಾಜದಲ್ಲಿ ವಿದ್ಯಾರ್ಥಿಗಳು ಗೌರವಯುತವಾಗಿ ಬಾಳಲು ಅನುಸರಿಸಬೇಕಾಗಿರುವ ಯಶಸ್ಸಿನ ಸೂತ್ರದ ಬಗ್ಗೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಕೆ.ವಿ.ಶ್ರೀಕಾಂತ್, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. ಈ ಸಂದರ್ಭ ಪ್ರತಿಯೊಂದು ವಿಭಾಗದ ಒಬ್ಬ ಅತ್ಯುತ್ತಮ ವಿದ್ಯಾರ್ಥಿಯನ್ನು ಗೌರವಿಸಲಾಯಿತು. ಕಚೇರಿ ಅಧೀಕ್ಷಕ ಸಿ.ಕೆ.ವಿನೋದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಿರಿಯ ತರಬೇತಿ ಅಧಿಕಾರಿ ಪುನೀತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ತರಬೇತಿ ಅಧಿಕಾರಿ ಕೃಷ್ಣಮೂರ್ತಿ ಜೆ.ಸ್ವಾಗತಿಸಿದರು ಮತ್ತು ಕೆ.ಜಿ.ಜಯಪ್ರಕಾಶ್ ವಂದಿಸಿದರು.









