
ಮಡಿಕೇರಿ ಜು.11 NEWS DESK : ಕೊಡಗು ಜಿಲ್ಲಾ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯಡಿಯಲ್ಲಿ ‘ಕೇಂದ್ರ ಸರ್ಕಾರದ ಜಾತಿ ಮತ್ತು ಜನಗಣತಿಯ ಕುರಿತು ಸ್ಪಷ್ಟತೆ ಹಾಗೂ ಜನಗಣತಿಯ ಹಿನ್ನೋಟ ಮತ್ತು ಮುನ್ನೋಟ’ ಎಂಬ ವಿಷಯದ ಕುರಿತು ಪೂರ್ವಭಾವಿ ಸಭೆ ನಡೆಯಿತು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ಅವರು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ದೇಶದಲ್ಲಿ ಅನೇಕ ಸಾಮಾಜಿಕ ಸುಧಾರಣೆಗಳನ್ನು ತಂದಿದ್ದು, ಇದೀಗ ಜಾತಿ ಮತ್ತು ಜನಗಣತಿಯ ದಿಟ್ಟ ಹೆಜ್ಜೆ ಇಟ್ಟಿದೆ. ಈ ಮಹತ್ವದ ಕಾರ್ಯದ ಯಶಸ್ಸಿಗೆ ಕಾರ್ಯಕರ್ತರ ಪಾತ್ರವೂ ಅಗತ್ಯ ಎಂದರು.
ಪ್ರತಿಯೊಬ್ಬರು ಪಕ್ಷ ಸಂಘಟನೆಯ ಮೂಲಕ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಕೈಬಲ ಪಡಿಸಬೇಕು ಎಂದು ಕರೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ಪೂಜಾರಿ, ಎಸ್.ಎನ್.ರಘು, ಉಪಾಧ್ಯಕ್ಷ ಕೆ.ಗಿರೀಶ್, ನಗರಾಧ್ಯಕ್ಷ ಗಜೇಂದ್ರ, ವಿರಾಜಪೇಟೆ ಅಧ್ಯಕ್ಷ ನವೀನ್ ಉತ್ತಯ್ಯ, ಸೋಮವಾರಪೇಟೆ ಅಧ್ಯಕ್ಷ ಸುನಿಲ್, ಮಡಿಕೇರಿ ಗ್ರಾಮಾಂತರ ಅಧ್ಯಕ್ಷ ಪ್ರದೀಪ್, ಮಾಧ್ಯಮ ಸಂಚಾಲಕರಾದ ವಿಠಲ ಪೂಜಾರಿ, ಅಕ್ಷಿತ್ ಪೂಜಾರಿ, ಬಿಜೆಪಿ ಮಡಿಕೇರಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ, ಮಹಿಳಾ ಅಧ್ಯಕ್ಷೆ ಸೌಮ್ಯ ಸುನಿಲ್, ಜಿಲ್ಲಾ ಕಾರ್ಯದರ್ಶಿಗಳು, ಕೋಶಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು. ಸುದೀಶ್ ಪುಳಿಯೇರಿ ಸ್ವಾಗತಿಸಿದರು.









