
ವಿರಾಜಪೇಟೆ ಜು.16 NEWS DESK : ವಿರಾಜಪೇಟೆ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಕೃಷಿ ಕಾರ್ಯಕ್ರಮದಡಿಯಲ್ಲಿ ಕಾನೂರು ವಲಯದ ಕುಟ್ಟ ಕಾರ್ಯಕ್ಷೇತ್ರದ ನಾಗರಹೊಳೆ ಅಭಯಾರಣ್ಯದ ಕಾಡಂಚಿನಲ್ಲಿರುವ ನಾಣಚ್ಚಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು. ಕೆ.ಬಾಡಗ ಪಂಚಾಯತ್ ಅಧ್ಯಕ್ಷ ರಿತೇಶ್ ಬಿದ್ದಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆ ಉತ್ತಮವಾದ ಕಾರ್ಯಕ್ರಮವಾಗಿದ್ದು, ಈ ರೀತಿ ಕಾರ್ಯಕ್ರಮ ಆಯೋಜಿಸುವುದರಿಂದ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡುತ್ತದೆ ಎಂದು ಹೇಳಿದರು. ಶಾಲಾ ಶಿಕ್ಷಕರಾದ ಹರೀಶ್ ಮಾತನಾಡಿ, ಪರಿಸರ ಎಂದರೆ ಏನು, ನಮ್ಮ ಸುತ್ತಮುತ್ತಲಿನ ಮರ-ಗಿಡಗಳನ್ನು ಹೇಗೆ ಬೆಳೆಸಬೇಕು, ಭೂಮಿಯನ್ನು ರಕ್ಷಿಸಬೇಕು, ನಮಗೆ ಶುದ್ಧವಾದ ನೀರು, ಶುದ್ಧವಾದ ಗಾಳಿ ಸಿಗುತ್ತದೆ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿರುತ್ತದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಎಲೆ ಗುರುತಿಸುವ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಯಿತು. ಊರಿನ ಗಣ್ಯರಾದ ಗುಂಡಿಯಂಗಡ ರಾಜು, ಶಾಲೆಯ ಮುಖ್ಯ ಶಿಕ್ಷಕರಾದ ಕೃಷ್ಣ, ಒಕ್ಕೂಟದ ಅಧ್ಯಕ್ಷ ಸುನಂದ ಮಣ, ಒಕ್ಕೂಟ ಪದಾಧಿಕಾರಿ ಅನಿತಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರತಾಪ್ ಜೆ.ಜೆ., ಕಾನೂರು ವಲಯ ಮೇಲ್ವಿಚಾರಕ ಸುಜೀರ್, ಕೃಷಿ ಮೇಲ್ವಿಚಾರಕ ವಸಂತ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಸ್ವಪ್ನ, ಶಿಕ್ಷಕಿ ಪ್ರಿಯ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕ ವೃಂದದವರು, ಸಂಘದ ಸದಸ್ಯರು ಹಳೆ ವಿದ್ಯಾರ್ಥಿಗಳು ಊರಿನ ಗ್ರಾಮಸ್ಥರು ಇದ್ದರು. ಇದೇ ಸಂದರ್ಭ ಶಾಲಾ ಆವರಣದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು.









