
ಮಡಿಕೇರಿ ಜು.24 NEWS DESK : ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಲಯನ್ಸ್ ಸಂಸ್ಥೆ ಮಡಿಕೇರಿ ವತಿಯಿಂದ ಜು.26ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮದನ್ ಮಾದಯ್ಯ ಹಾಗೂ ಕಾರ್ಯದರ್ಶಿ ಮಧುಕರ್ ಕೆ. ತಿಳಿಸಿದ್ದಾರೆ.
ಕ್ಲಿಯರ್ ಮೆಡಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮೈಸೂರು ಇವರ ಸಹಯೋಗದೊಂದಿಗೆ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಮಡಿಕೇರಿಯ ಲಯನ್ಸ್ ಸಭಾಂಗಣದಲ್ಲಿ ಆರೋಗ್ಯ ಶಿಬಿರ ನಡೆಯಲಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಮೂತ್ರ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಅನ್ವೇಶ್ ಅವರು ಮೂತ್ರನಾಳದ ಸೋಂಕು, ಮೂತ್ರಪಿಂಡದ ಕಲ್ಲು, ಹೆಚ್ಚಿದ ಮೂತ್ರವಿಸರ್ಜನೆ ಮತ್ತು ಸೋರಿಕೆ, ಲೈಂಗಿಕ ಶಕ್ತಿಯ ಸಂಬಂಧಿತ ತೊಂದರೆಗಳು ಹಾಗೂ ಪ್ರಾಸ್ಟೇಟ್ ಸಂಬಂಧಿತ ಸಮಸ್ಯೆಗಳ ಕುರಿತು ತಪಾಸಣೆ ನಡೆಸಲಿದ್ದಾರೆ. ಜನರಲ್ ಮೆಡಿಸಿನ್ ಡಾ.ಅನಿತಾ ಶೇಷಾದ್ರಿ ಅವರು ಜ್ವರ, ಆಯಾಸ, ದೇಹದ ನೋವು, ಜೀರ್ಣಕ್ರಿಯೆ ಹಾಗೂ ಉಸಿರಾಟದ ತೊಂದರೆಗಳು, ತೂಕದ ಅಪರೂಪದ ಬದಲಾವಣೆ, ಚರ್ಮದಲ್ಲಾಗುತ್ತಿರುವ ವ್ಯತ್ಯಾಸ ಮತ್ತು ಮಾನಸಿಕ ಆರೋಗ್ಯದ ಕಾಳಜಿಯ ಕುರಿತು ತಪಾಸಣೆ ನಡೆಸಲಿದ್ದಾರೆ. ಕಿವಿ, ಮೂಗು, ಗಂಟಲು ಶಸ್ತ್ರ ಚಿಕಿತ್ಸಾ ತಜ್ಞ ಡಾ.ಕಾರ್ತಿಕ್ ಅವರು ಸೈನಸ್ ಸಮಸ್ಯೆಗಳು, ಮೂಗಿನ ರಕ್ತಸ್ರಾವ, ಗಂಟಲು ನೋವು ಮತ್ತು ಉರಿಯೂತ, ತಲೆನೋವು, ಕೆಮ್ಮು, ಗೊರಕೆ ಹಾಗೂ ಸಮತೋಲನದ ತೊಂದರೆಗಳ ಕುರಿತು ತಪಾಸಣೆ ನಡೆಸಲಿದ್ದಾರೆ ಎಂದು ಮದನ್ ಮಾದಯ್ಯ ಹಾಗೂ ಮಧುಕರ್ ಕೆ. ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿರುವ ಅವರು ಹೆಚ್ಚಿನ ಮಾಹಿತಿಗಾಗಿ 99022 66007 ಮತ್ತು 98444 81919 ನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.









