
ಮಡಿಕೇರಿ NEWS DESK ಜು.31 : ಕಳೆದ ಒಂದು ವಾರ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಯಿಂದ ಬರೆ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಪೋಕ್ಲು ಬ್ಲಾಕ್ ಮೇಕೇರಿ ಗ್ರಾಮದ ಶಕ್ತಿನಗರ ಕಾಲೋನಿ ನಿವಾಸಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಸಹಾಯಹಸ್ತ ಚಾಚಿದ್ದಾರೆ. ತಮ್ಮ ಸ್ವಂತ ಖರ್ಚಿನಿಂದ ಟಾರ್ಪಲ್ ಗಳನ್ನು ಖರೀದಿಸಿ ನಿವಾಸಿಗಳಿಗೆ ನೀಡಲು ಕ್ರಮ ಕೈಗೊಂಡಿದ್ದಾರೆ. ಕಾರ್ಯನಿಮಿತ್ತ ಬೆಂಗಳೂರಿನಲ್ಲಿರುವ ಶಾಸಕರು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಕೆ.ಎ ಅವರ ಮೂಲಕ ಟಾರ್ಪಲ್ ಗಳನ್ನು ವಿತರಿಸಿದರು. ಈ ಸಂದರ್ಭ ಮೇಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಪೂಜಾರಿರ ಧ್ರುವ, ಹಾಕತ್ತೂರು ವಲಯ ಅಧ್ಯಕ್ಷ ಪಿಯೂಷ್ ಪೆರೇರ, ಮೇಕೇರಿ ಗ್ರಾಮ ಪಂಚಾಯತ್ ಸದಸ್ಯ ಎಂ.ಯು.ಹನೀಫ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಬಶೀರ್, ಸ್ಥಳೀಯ ಪ್ರಮುಖರಾದ ಹ್ಯಾರಿಸ್, ರಫೀಕ್ ಮತ್ತಿತರರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಕೆ.ಎ ಮಾತನಾಡಿ ಶಾಸಕರು ಬೆಂಗಳೂರಿಂದ ಹಿಂತಿರುಗಿದ ತಕ್ಷಣ ಎಲ್ಲರನ್ನು ಖುದ್ದಾಗಿ ಭೇಟಿಯಾಗಲಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರದ ಕುರಿತು ವ್ಯವಸ್ಥೆ ಮಾಡಲಿದ್ದಾರೆ ಎಂದರು.









