
ಮಡಿಕೇರಿ ಆ.8 NEWS DESK : ಪಂಚಾಯತಿ ವ್ಯಾಪ್ತಿಗೆ ಬರುವ ಕಂದಾಯ ಗ್ರಾಮಗಳಾದ ಕಾಲೂರು ಹಾಗೂ ಹಮಿಯಾಲ ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳಾಗಿ ಘೋಷಿಸುವ ಕುರಿತು ಗಾಳಿಬೀಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪೂರ್ವ ಭಾವಿ ಸಭೆ ನಡೆಯಿತು. ಅದ್ಯಕ್ಷರಾದ ಪುಪ್ಷವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ತಂಬಾಕು ಮುಕ್ತ ಗ್ರಾಮ ಘೋಷಣೆ, ಗೃಹ ಆರೋಗ್ಯ ಯೋಜನೆ, ಕುಷ್ಠರೋಗ ಪತ್ತೆ ಅಭಿಯಾನ, ಕ್ಷಯರೋಗ ಮುಕ್ತ, ಮತ್ತು ಡೆಂಗ್ಯೂ ನಿಯಂತ್ರಣ ಕುರಿತು ಮಾಹಿತಿ ನೀಡಿ ಪಂಚಾಯತಿ ಸಹಕಾರ ನೀಡುವಂತೆ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಾಲಾಕ್ಷ ಮಾತನಾಡಿ, ಸ್ತನ್ಯಪಾನ ಸಪ್ತಾಹ ಕುರಿತು ತಾಯಂದಿರು ಶಿಶುವಿಗೆ ಎದೆ ಹಾಲು ನೀಡುವುದರಿಂದ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ತಂಬಾಕು ಕೋಶದ ಪುನೀತ, ಮಂಜುನಾಥ್ ಅವರು ತಂಬಾಕು ಮುಕ್ತ ಗ್ರಾಮದ ಮಾರ್ಗಸೂಚಿ ಕುರಿತು ವಿವರಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರಾಜಶೇಖರ ಮತ್ತು ಸದಸ್ಯರು, ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಶಿಕಿರಣ್ ಹಾಜರಿದ್ದರು.









