
ಮಡಿಕೇರಿ ಆ.11 NEWS DESK : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಮತಗಳ್ಳತನದ ಕುರಿತು ಆಧಾರ ರಹಿತ ಸುಳ್ಳು ಆರೋಪಗಳನ್ನು ಮಾಡುತ್ತಿರುವುದರಿಂದ ಇವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕೆಂದು ವಿರಾಜಪೇಟೆ ಮಂಡಲ ಬಿಜೆಪಿಯ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕೂಡ ಮತಗಳ್ಳತನದ ಮೂಲಕ ಬಿಜೆಪಿ ಗೆಲುವು ಸಾಧಿಸಿದೆ ಎಂದು ಎಂ.ಲಕ್ಷ್ಮಣ್ ಅವರು ಮಾಡಿರುವ ಆರೋಪವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ಸೋಲಿನ ಹತಾಶೆಯಿಂದ ಹೊರ ಬರಲಾಗದೆ ಪರಿತಪಿಸುತ್ತಿರುವ ಲಕ್ಷ್ಮಣ್ ಅವರು ತಮ್ಮ ನಾಯಕ ರಾಹುಲ್ ಗಾಂಧಿ ಅವರಂತೆ ಯಾವುದೇ ದಾಖಲೆ ಇಲ್ಲದ ಆಧಾರ ರಹಿತ ಆರೋಪಗಳನ್ನು ಮಾಡುತ್ತಾ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಸುಳ್ಳು ಹೇಳಿಕೆಗಳನ್ನು ನೀಡಿ ಅಪಪ್ರಚಾರ ಮಾಡುವವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವ ಕಾನೂನನ್ನು ಕಾಂಗ್ರೆಸ್ ಸರಕಾರವೇ ಜಾರಿಗೆ ತಂದಿದೆ. ಈ ಕಾನೂನಿನನ್ವಯ ಲಕ್ಷ್ಮಣ್ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ರಾಕೇಶ್ ದೇವಯ್ಯ ಆಗ್ರಹಿಸಿದ್ದಾರೆ. 2024ರ ಲೋಕಸಭಾ ಚುನಾವಣೆ ಸಂದರ್ಭ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಇತ್ತು. ಚುನಾವಣಾ ಆಯೋಗ ಮತದಾರರ ಅಧಿಕೃತ ಪಟ್ಟಿಯನ್ನು ಅಂತಿಮಗೊಳಿಸುವುದಕ್ಕೂ ಮೊದಲು ಪರಿಶೀಲನೆಗಾಗಿ ಪ್ರತಿಯನ್ನು ರಾಜ್ಯ ಸರಕಾರದ ಅಧೀನದ ಅಧಿಕಾರಿಗಳಿಗೆ ಕಳುಹಿಸುತ್ತಾರೆ. ಅಲ್ಲದೆ ಇದರ ಬಗ್ಗೆ ತಕರಾರು ಇದ್ದಲ್ಲಿ, ಹೆಸರನ್ನು ಸೇರಿಸಲು ಅಥವಾ ಹೆಸರನ್ನು ಕೈಬಿಡಲು ಸಂಬಂಧ ಪಟ್ಟ ದಾಖಲೆಯನ್ನು ಸರಿಹೊಂದಿಸಿ ಚುನಾವಣಾ ಆಯೋಗಕ್ಕೆ ಕಳುಹಿಸಬೇಕು. ಇದು ಯಾವುದನ್ನೂ ಮಾಡದ ಎಂ.ಲಕ್ಷ್ಮಣ್ ಅವರು ಸೋತ ಮನೋಸ್ಥಿತಿಯಿಂದ ಹೊರಬರಲಾಗದೆ ವಿನಾಕಾರಣ ಚುನಾವಣಾ ಆಯೋಗದ ವಿರುದ್ಧ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರ ಹಕ್ಕಿನ ವಿರುದ್ಧ ಮತ್ತು ಚುನಾವಣಾ ಆಯೋಗದ ವಿರುದ್ಧ ಸುಳ್ಳು ಆರೋಪ ಮಾಡಿ ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸುತ್ತಿರುವ ಲಕ್ಷ್ಮಣ್ ಅವರು ಸೂಕ್ತ ದಾಖಲೆಯನ್ನು ನೀಡಬೇಕು. ತಪ್ಪಿದಲ್ಲಿ ಸುಳ್ಳು ಆರೋಪದಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ. ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಲಕ್ಷ್ಮಣ್ ಅವರು ಸೂಕ್ತ ದಾಖಲೆಯನ್ನು ಒದಗಿಸದೇ ಇದ್ದರೆ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ ಗೆಲುವು ಪ್ರಶ್ನಾರ್ಥಕವಾಗಿಯೇ ಉಳಿದು ಬಿಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.








