
ಮಡಿಕೇರಿ NEWS DESK ಆ.11 : ಮೂವರು ಆರೋಪಿಗಳ ಸಹಿತ 12 ಕೆ.ಜಿ ಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಹುಣಸೂರು ಪಟ್ಟಣದ ವಿಜಯನಗರ ನಿವಾಸಿಗಳಾದ ಅನೀಸ್ ಅಹಮ್ಮದ್(45), ಪಿ.ಚೇತನ್(40) ಹಾಗೂ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಅಂತರಂಸಂತೆ ದೊಡ್ಡಬೈರನಕುಟ್ಟೆ ಗ್ರಾಮದ ನಿವಾಸಿ ಜಿ.ಅಕ್ರಂ(48) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಾದ ಅನೀಸ್ ಅಹಮ್ಮದ್ ಹಾಗೂ ಪಿ.ಚೇತನ್ ಅವರ ಬಳಿಯಿಂದ 7 ಕೆ.ಜಿ 872 ಗ್ರಾಂ ಗಾಂಜಾ, ಒಂದು ಕಾರು, 1 ಮೊಬೈಲ್ ಮತ್ತು ಗಾಂಜಾ ಸಾಗಿಸಲು ಬಳಸಿದ್ದ ಪ್ಲಾಸ್ಟಿಕ್ ಚೀಲವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಣಸೂರು ಕಡೆಯಿಂದ ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಿಸುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಪೊಲೀಸರು ಪತ್ತೆ ಹಚ್ಚಿದರು. ಕೇರಳದಲ್ಲಿ ಮಾರಾಟ ಮಾಡಲು ಗಾಂಜಾ ಸಾಗಾಟವಾಗುತ್ತಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆ ವಿರಾಜಪೇಟೆ ಪೊಲೀಸರು ಆರ್ಜಿ ಪೆರುಂಬಾಡಿ ಬಳಿ ಬಂದ ಕಾರನ್ನು ಪರಿಶೀಲನೆಗೆ ಒಳಪಡಿಸಿದರು. ಈ ಸಂದರ್ಭ ಕಾರಿನಲ್ಲಿ 4 ಪ್ಲಾಸ್ಟಿಕ್ ಚೀಲಗಳಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ. ಸ್ಥಳದಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಎನ್ಡಿಪಿಎಸ್ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ವಿರಾಜಪೇಟೆ ಡಿವೈಎಸ್ಪಿ ಮಹೇಶ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ಪ್ರಮೋದ್, ಎಎಸ್ಐ ಮಂಜುನಾಥ್ ಸಿಬ್ಬಂದಿಗಳಾದ ಧರ್ಮ, ಗಿರೀಶ್, ಜೋಸ್ ನಿಶಾಂತ್, ಕುಮಾರ್, ಹೇಮಂತ್ ಕುಮಾರ್, ಶಿವ ಕುಮಾರ್ ಹಾಗೂ ಶಿವ ಶರಣಪ್ಪ ಕಾರ್ಯಾಚರಣೆ ನಡೆಸಿದರು.
*ಮತ್ತೊಂದು ಪ್ರಕರಣ* ಮತ್ತೊಂದು ಪ್ರಕರಣದಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಟ್ಟಂಗಾಲ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಮಾಲು ಸಹಿತ ವಶಕ್ಕೆ ಪಡೆಯುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಅಂತರಂಸಂತೆ ದೊಡ್ಡಬೈರನಕುಟ್ಟೆ ಗ್ರಾಮದ ನಿವಾಸಿ ಜಿ.ಅಕ್ರಂ(48) ಬಂಧಿತ ಆರೋಪಿಯಾಗಿದ್ದಾನೆ. ಈತನ ಬಳಿಯಿಂದ 4 ಕೆ.ಜಿ 710 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಹೀಗೆ 12 ಕೆ.ಜಿ ಗೂ ಅಧಿಕ ಗಾಂಜಾವನ್ನು ಪತ್ತೆ ಹಚ್ಚುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ವಿರಾಜಪೇಟೆ ವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.








