
ನಾಪೋಕ್ಲು ಆ.19 NEWS DESK : ಗ್ರಾಮೀಣ ಭಾಗಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸಿಗುವ ಶಿಕ್ಷಣ ಪ್ರಮುಖವಾದದು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರ ಎ.ಎಸ್.ಪೊನ್ನಣ್ಣ ಅವರು ಹೇಳಿದರು. ಹಳೆ ತಾಲೂಕು ಅಂಗನವಾಡಿ ಕೇಂದ್ರದಲ್ಲಿ ನೂತನವಾಗಿ ಪ್ರಾರಂಭಗೊಂಡ ಎಲ್. ಕೆ. ಜಿ ಹಾಗೂ ಯು. ಕೆ. ಜಿ. ತರಗತಿ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣದ ಭಧ್ರ ಅಡಿಪಾಯವನ್ನು ಹಾಕಬೇಕಿದೆ.ಅದು ಅಂಗನವಾಡಿ ಕೇಂದ್ರಗಳ ಮುಖಾಂತರ ಆಗಬೇಕಿದ್ದು, ಎಳೆಯ ವಯಸ್ಸಿನಿಂದಲೇ ಮಕ್ಕಳು ಶಿಸ್ತನ್ನು ಕಲಿಯಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ತರಬೇತಿ ನೀಡಬೇಕು. ಆ ಮೂಲಕ ಶಿಸ್ತುಬದ್ಧ ಬದುಕನ್ನು ರೂಪಿಸುವಂತಾಗಬೇಕು ಎಂದರು. ಸಮಾಜದ ಉತ್ತಮ ಪ್ರಜೆಗಳನ್ನು ರೂಪಿಸುವುದು, ಸರ್ಕಾರದ ಆಶಯ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ,ಯುಕೆಜಿ ಅನ್ನು ಪ್ರಾರಂಭಿಸಲಾಗುವುದು .ವಿರಾಜಪೇಟೆ ತಾಲೂಕಿನ ಕೆಲವೆಡೆ ಎಲ್ ಕೆಜಿ,ಯುಕೆಜಿ ಅನ್ನು ಈಗಾಗಲೇ ಆರಂಭಿಸಲಾಗಿದೆ ಮಡಿಕೇರಿ ತಾಲೂಕಿನ ನಾಪೋಕ್ಲುವಿನಲ್ಲಿ ಇದೀಗ ಅಂಗನವಾಡಿ ಕೇಂದ್ರ ದಲ್ಲಿ ಅಧಿಕೃತವಾಗಿ ಎಲ್ ಕೆ ಜಿ ಯು ಕೆ ಜಿ ಯನ್ನು ಪ್ರಾರಂಭಿಸಲಾಗಿದ್ದು ಗ್ರಾಮೀಣ ಭಾಗದ ಮಕ್ಕಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಕ್ಕಳಿಗೆ ಕೊಟ್ಟು ಶುಭ ಹಾರೈಸಿದರು. ಎಲ್ ಕೆ ಜಿ, ಯು ಕೆ ಜಿ ಕೊಠಡಿಯನ್ನು ಉದ್ಘಾಟಿಸಿದ ದಾನಿಗಳಾದ ಡಾ.ದೇವದಾಸ್ ಮಾತನಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಈ ಕಾರ್ಯಕ್ರಮ ಶ್ಲಾಘನೀಯ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು. ಗ್ರಾಮ ಪಂಚಾಯತಿ ಸದಸ್ಯ ಮಾಚೇಟ್ಟಿರ ಕುಶು ಕುಶಾಲಪ್ಪ ಉದ್ಘಾಟನೆಗೂ ಮೊದಲು ಸ್ವಾಗತಿಸಿದರು, ಪೂಜಾ ಕಾರ್ಯವನ್ನು ಹರೀಶ್ ಭಟ್ ನೆರವರಿಸಿಕೊಟ್ಟರು. ಈ ಸಂದರ್ಭ ಸ್ಥಳದಾನಿಗಳಾದ ಕುಲ್ಲೇಟಿರ ಚಿನ್ನವ್ವ, ದಾನಿಗಳಾದ ಡಾಕ್ಟರ್ ದೇವದಾಸ್ ಅವರುಗಳನ್ನು ಅಂಗನವಾಡಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅನಂತರ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಗ್ರಾಮ ಪಂಚಾಯತಿ ಅಧ್ಯಕ್ಷ ವನಜಾಕ್ಷಿ ರೇಣುಕೇಶ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದವೇದಿಕೆಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ, ಗ್ರಾಮ ಪಂಚಾಯತಿ ಸದಸ್ಯ ಅರುಣ್ ಬೇಬ, ಅಮಹಮ್ಮದ್ ಟಿ.ಎ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಪ್ರಸನ್ನ ಕುಮಾರ್, ಕ್ಷೇತ್ರಶಿಕ್ಷಣಾಧಿಕಾರಿ ಮಹೇಶ್, ಇನ್ನಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಸಾಂಪ್ರದಾಯಿಕ ಉಡುಗೆ ತೊಡುಗೆ ದುಡಿ ಕೊಟ್ಟು ಪಾಟ್ ತಲಿಯಕ್ಕಿ ಬೋಲಕ್ ನೊಂದಿಗೆ ಅತಿಥಿಗಳನ್ನು ಗೌರವದಿಂದ ಬರಮಾಡಿಕೊಳ್ಳಲಾಯಿತು. ಪುಟಾಣಿ ವಿದ್ಯಾರ್ಥಿ ವಿಹಾನ್ ಪೊನ್ನಪ್ಪ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮೀ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ, ಮೇಲ್ವಿಚಾರಕಿ ಶೀಲ ನಿರೂಪಿಸಿದರು. ಕಾರ್ಯಕ್ರಮವನ್ನು ಅಂಗನವಾಡಿ ಶಿಕ್ಷಕಿ ಭಾಗ್ಯವತಿ ವಂದಿಸಿದರು. ಸಮಾರಂಭದಲ್ಲಿ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.









